ಬಂಧನ (ಸಾಂದರ್ಭಿಕ ಚಿತ್ರ)
ಬೆಳಗಾವಿ: ಇಲ್ಲಿನ ಉದ್ಯಮಬಾಗ್ ಕೈಗಾರಿಕಾ ಪ್ರದೇಶದಲ್ಲಿ ಶನಿವಾರ ಗಾಂಜಾ ಸಾಗಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತಾಲ್ಲೂಕಿನ ಮಚ್ಛೆಯ ಆಕಾಶ ದೊಡಮನಿ, ನಿಖಿಲ್ ಸೋಮಜಿಚೆ, ವೀರೇಶ ಹಿರೇಮಠ ಬಂಧಿತರು. ಅವರಿಂದ ₹6.90 ಲಕ್ಷ ಮೌಲ್ಯದ 23.84 ಕೆ.ಜಿ ಗಾಂಜಾ, ₹3 ಲಕ್ಷ ಮೌಲ್ಯದ ಕಾರು, ₹2 ಸಾವಿರ ಮೌಲ್ಯದ ಎರಡು ಮೊಬೈಲ್ ಮತ್ತು ₹1,100 ನಗದು ವಶಕ್ಕೆ ಪಡೆಯಲಾಗಿದೆ.
‘ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 2023ರಲ್ಲಿ ನಡೆದ ದಾಳಿಗಳಲ್ಲಿ 11 ಕೆ.ಜಿ ಮತ್ತು 2024ರ ದಾಳಿಗಳಲ್ಲಿ 12 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದೆವು. ಆದರೆ, ಉದ್ಯಮಬಾಗ್ ಇನ್ಸ್ಪೆಕ್ಟರ್ ಡಿ.ಕೆ.ಪಾಟೀಲ ನೇತೃತ್ವದ ತಂಡ ಇದೊಂದೇ ಪ್ರಕರಣದಲ್ಲಿ 23 ಕೆ.ಜಿಗಿಂತ ಹೆಚ್ಚಿನ ಪ್ರಮಾಣದ ಗಾಂಜಾ ವಶಕ್ಕೆ ಪಡೆದಿದೆ. ಇತ್ತೀಚಿನ ವರ್ಷಗಳಲ್ಲೇ ನಡೆದ ದೊಡ್ಡ ದಾಳಿ ಇದಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭೂಷಣ ಬೊರಸೆ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಹಾರಾಷ್ಟ್ರದಿಂದ ಗಾಂಜಾ ಬರುತ್ತಿತ್ತು. ಈ ಆರೋಪಿಗಳು ಇಡೀ ನಗರಕ್ಕೆ ಪೂರೈಸುತ್ತಿದ್ದರು. ಕಾಲೇಜು ವಿದ್ಯಾರ್ಥಿಗಳೇ ಹೆಚ್ಚಾಗಿ ಬಳಕೆದಾರರಾಗಿದ್ದರು ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ದಂಧೆಯಲ್ಲಿ ಯಾರು ಸಕ್ರಿಯವಾಗಿದ್ದಾರೆ, ಮಾರಾಟ ಪ್ರಕ್ರಿಯೆ ಹೇಗೆ ನಡೆಯುತ್ತಿತ್ತು ಎಂದು ತನಿಖೆ ನಡೆಸಿದ್ದೇವೆ. ಈ ಪ್ರಕರಣದಲ್ಲಿ ಪರಾರಿಯಾದ ಆರೋಪಿಗಳ ಪತ್ತೆಗೆ ಕ್ರಮ ವಹಿಸಿದ್ದೇವೆ’ ಎಂದರು.
‘ಬೆಳಗಾವಿಯ ವಿವಿಧ ಶಾಲೆ–ಕಾಲೇಜುಗಳಲ್ಲಿ ಮಾದಕವಸ್ತುಗಳ ಹಾವಳಿ ತಡೆಗಟ್ಟುವಿಕೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲಿ ‘ಆ್ಯಂಟಿ ಡ್ರಗ್ ಕಮಿಟಿ’ ರಚಿಸುವಂತೆ ತಿಳಿಸಲಾಗಿದೆ’ ಎಂದು ಹೇಳಿದರು.
‘ಮಾದಕವಸ್ತು ಸೇವಿಸುವವರಲ್ಲಿ ಯುವಜನರೇ ಹೆಚ್ಚಾಗಿ ಕಂಡುಬರುತ್ತಿದ್ದಾರೆ. ಹಾಗಾಗಿ ಪಾಲಕರು ತಮ್ಮ ಮನೆಯಲ್ಲೂ ಮಕ್ಕಳ ವರ್ತನೆ, ಶೈಕ್ಷಣಿಕ ಪ್ರಗತಿ ಮತ್ತು ಆರೋಗ್ಯದ ಮೇಲೆ ನಿಗಾ ವಹಿಸಬೇಕು. ನಗರದಲ್ಲಿ ಯಾವುದೇ ಕಡೆ ಮಾದಕವಸ್ತು ಮಾರುತ್ತಿರುವುದು ಕಂಡುಬಂದರೆ ಸಾರ್ವಜನಿಕರು ನಮಗೆ ಮಾಹಿತಿ ನೀಡಬೇಕು’ ಎಂದು ಕೋರಿದರು.
‘2025ರಲ್ಲಿ ಜುಲೈ 20ರವರೆಗೆ 21 ದಾಳಿ ನಡೆಸಿ 45 ಆರೋಪಿಗಳನ್ನು ಬಂಧಿಸಿದ್ದು, 40 ಕೆ.ಜಿ ಮಾದಕವಸ್ತು ವಶಕ್ಕೆ ಪಡೆಯಲಾಗಿದೆ. ಗಾಂಜಾ ಸಾಗಿಸುವವರು, ಮಾರುವವರು ಮಾತ್ರವಲ್ಲ; ಸೇವಿಸುವವರನ್ನೂ ಬಂಧಿಸಿ, ಕಠಿಣ ಕ್ರಮ ಜರುಗಿಸುತ್ತಿದ್ದೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.