
ಖಾನಾಪುರ: ಬೆಳಗಾವಿ–ಪಣಜಿ ರಾಷ್ಟ್ರೀಯ ಹೆದ್ದಾರಿಯ ತಾಲ್ಲೂಕಿನ ಅಸ್ತೋಲಿ ಗ್ರಾಮದ ಹೊರವಲಯದಲ್ಲಿ ಗುರುವಾರ ಇನ್ನೊವಾ ಮತ್ತು ಕ್ವಿಡ್ ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಕ್ವಿಡ್ ಕಾರಿನಲ್ಲಿದ್ದ ಇಬ್ಬರು ಸಾವನ್ನಪ್ಪಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಇನ್ನೋವಾ ಕಾರಿನಲ್ಲಿದ್ದ ಕಾರಿನ ಚಾಲಕ ಗಂಭೀರವಾಗಿ ಮತ್ತು ಉಳಿದ ಪ್ರಯಾಣಿಕರು ಸಾಧಾರಣ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಈ ಅಪಘಾತದಲ್ಲಿ ಕ್ವಿಡ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸೌತ್ ಗೋವಾ ಜಿಲ್ಲೆಯ ಫೋಂಡಾ ನಿವಾಸಿಗಳಾದ ರುದ್ರಯ್ಯ ಶಿವಯ್ಯನವರ (77) ಮತ್ತು ರೇಣುಕಾ ಹಿರೇಮಠ (55) ಮೃತಪಟ್ಟಿದ್ದಾರೆ.
ಇದೇ ಕಾರಿನಲ್ಲಿದ್ದ ಶಿವರಾಜ ಹಿರೇಮಠ, ಬಸವ್ವ ರುದ್ರಯ್ಯ ಶಿವಯ್ಯನವರ ಮತ್ತು ಇನ್ನೊವಾ ಕಾರಿನ ಚಾಲಕ, ಹುಬ್ಬಳ್ಳಿ ನಿವಾಸಿ ಹಜರತಲಿ ಕುಣಬಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗೋವಾದಿಂದ ಹುಬ್ಬಳ್ಳಿಯತ್ತ ಹೊರಟಿದ್ದ ಇನ್ನೊವಾ ಕಾರು ಮತ್ತು ಹುಬ್ಬಳ್ಳಿಯಿಂದ ಗೋವಾದತ್ತ ಸಾಗುತ್ತಿದ್ದ ಕ್ವಿಡ್ ಕಾರಿನ ಮಧ್ಯೆ ಅಪಘಾತ ಸಂಭವಿಸಿದೆ. ಇನ್ನೊವಾ ಚಾಲಕ ತನ್ನ ಕಾರನ್ನು ನಿಷ್ಕಾಳಜಿತನದಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ಕ್ವಿಡ್ ಕಾರಿಗೆ ಗುದ್ದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.