ಮೂಡಲಗಿ: ಮೂಡಲಗಿಯ ಬಜ್ಮೇ ತೋಹಿದ ತಂಜೀಮ (ಬಿಟಿಟಿ) ಕಮಿಟಿಯ ಅಧಿಕಾರವಧಿಯು ಕಳೆದ ಜೂನ್ 2022ರಂದು ಮುಗಿದಿದ್ದರೂ ಸಹ ಕೆಲವರು ಸೇರಿ ಅನಧಿಕೃತವಾಗಿ ಆಡಳಿತ ನಡೆಸುತ್ತಿರವುದನ್ನು ಪ್ರತಿಭಟಿಸಿ ಮೈನುದ್ದಿನ ಅಲ್ಲಾಬಕ್ಷ ಪಟೇಲ್ ಏಕವ್ಯಕ್ತಿಯಾಗಿ ಗುರ್ಲಾಪುರ ರಸ್ತೆಯಲ್ಲಿರುವ ಜಾಮೀಯಾ ಮಸೀದಿ ಬಳಿಯಲ್ಲಿ ಶುಕ್ರವಾರ ಬೆಳಿಗ್ಗೆಯಿಂದ ಅನಿದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
‘ಈ ಹಿಂದಿನ ಅವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಮಲಿಕಜಾನ ದಸ್ತಗಿರಸಾಬ ಕಳ್ಳಿಮನಿ ಮತ್ತು ಕೆಲವು ಸದಸ್ಯರು ಸೇರಿ ಅನಿಧಿಕೃತವಾಗಿ ಆಡಳಿತವನ್ನು ನಡೆಸುತ್ತಿದ್ದಾರೆ. ತಮ್ಮ ಆಡಳಿತಾವಧಿಯಲ್ಲಿಯ ಕಮಿಟಿಯ ಲೆಕ್ಕಪತ್ರವನ್ನು ಕೊಡುತ್ತಿಲ್ಲ ಮತ್ತು ಲೆಕ್ಕಪತ್ರವನ್ನು ಕೇಳಿದರೆ ಹಲ್ಲೆ ನಡೆಸುತ್ತಿದ್ದಾರೆ. ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರ ಮೈನುದ್ದಿನ ಪಟೇಲ ಮೂಡಲಗಿ ತಹಶೀಲ್ದಾರ್ ಅವರಿಗೆ ಬರೆದ ಮನವಿಯಲ್ಲಿ ತಿಳಿಸಿದ್ದಾರೆ.
ಬಿಟಿಟಿ ಕಮಿಟಿಗೆ ಹೊಸ ಆಡಳಿತ ಮಂಡಳಿಯನ್ನು ಕೂಡಲೇ ನೇಮಿಸಬೇಕು ಮತ್ತು ಈ ಹಿಂದಿನ ಅವಧಿಯಲ್ಲಿಯ ಬಿಟಿಟಿ ಕಮಿಟಿ ಲೆಕ್ಕಪತ್ರವನ್ನು ಸರಿಯಾಗಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಮನವಿ ಪ್ರತಿಯನ್ನು ಜಿಲ್ಲಾಧಿಕಾರಿಗಳಿಗೆ, ಬೆಂಗಳೂರಿನ ವಕ್ಫ್ ಕಮಿಟಿ ಸಿಇಒ ಹಾಗೂ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಅಧ್ಯಕ್ಷರಿಗೆ ಕಳಿಸಿದ್ದಾರೆ.
ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಶಿವಾನಂದ ಬಬಲಿ ಅವರು ಮನವಿ ಸ್ವೀಕರಿಸಿದರು.
ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಮೈನುದ್ದಿನ ಪಟೇಲ ಅವರಿಗೆ ಬೆಂಬಲವಾಗಿ ಅಜೀಜ್ ಡಾಂಗೆ, ಅನ್ವರ ನದಾಫ, ಅಬ್ದುಲಗಫಾರ ಡಾಂಗೆ, ರಹಮಾನ ಝಾರೆ, ಶಬ್ಬೀರ ಡಾಂಗೆ, ಷರೀಪ ಪಟೇಲ, ಸಲೀಮ ಇನಾಮದಾರ, ದಾದುಸಾಬ ಮಗುಟಖಾನ, ರಾಜು ಅತ್ತಾರ, ಸಾಹೇಬ ಪೀರಜಾದೆ, ಹಸನ್ ಅತ್ತಾರ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.