ADVERTISEMENT

ಬೆಳಗಾವಿ: ವಚನ ಗಾಯನ ಶಿಬಿರ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2020, 11:45 IST
Last Updated 3 ಫೆಬ್ರುವರಿ 2020, 11:45 IST
ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಮಹಿಳೆಯರಿಗೆ ಏರ್ಪಡಿಸಿದ್ದ ವಚನ ಗಾಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರೊ.ವಿಜಯಕುಮಾರ ತೇಲಿ ಅವರನ್ನು ಸತ್ಕರಿಸಲಾಯಿತು
ಬೆಳಗಾವಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಮಹಿಳೆಯರಿಗೆ ಏರ್ಪಡಿಸಿದ್ದ ವಚನ ಗಾಯನ ಶಿಬಿರದ ಸಮಾರೋಪ ಸಮಾರಂಭದಲ್ಲಿ ಸಂಪನ್ಮೂಲ ವ್ಯಕ್ತಿ ಪ್ರೊ.ವಿಜಯಕುಮಾರ ತೇಲಿ ಅವರನ್ನು ಸತ್ಕರಿಸಲಾಯಿತು   

ಬೆಳಗಾವಿ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದಿಂದ ಮಹಿಳೆಯರಿಗಾಗಿ ಏರ್ಪಡಿಸಿದ್ದ ಹತ್ತು ದಿನಗಳ ವಚನ ಗಾಯನ ಶಿಬಿರದ ಸಮಾರೋಪ ಸಮಾರಂಭವು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ನಡೆಯಿತು.

ಸಂಪನ್ಮೂಲ ವ್ಯಕ್ತಿಯಾಗಿದ್ದ ಸಂಗೀತ ವಿದ್ವಾಂಸ ಪ್ರೊ.ವಿಜಯಕುಮಾರ ತೇಲಿ, ‘ಗಾಯನ ವಿದ್ಯೆಯು ಲೇಸು ಎನ್ನುವ ಸರ್ವಜ್ಞನ ಮಾತಿನಂತೆ ಕಲೆಗಳಲ್ಲಿ ಸಂಗೀತಕ್ಕೆ ಶ್ರೇಷ್ಠವಾದ ಸ್ಥಾನವಿದೆ. ಅದಕ್ಕೆ ಮಳೆ ತರಿಸುವ, ಮನ ತಣಿಸುವ, ನೋವು ಮರೆಸುವ, ಭಾವಗಳನ್ನರಳಿಸುವ ಶಕ್ತಿ ಇದೆ. ವಚನಗಳನ್ನು ಸರಿಯಾದ ಸ್ವರ ತಾಳ ಲಯ ಮತ್ತು ಅರ್ಥಗ್ರಹಿಕೆಯೊಂದಿಗೆ ಹಾಡಿದರೆ ಅವಿರಳ ಆನಂದ ಸಿಗುತ್ತದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಮಹಿಳೆಯರಿಗೆ ಕಲೆ, ಸಾಹಿತ್ಯದ ಸಂಸ್ಕಾರ ನೀಡಿದರೆ ಮನುಕುಲಕ್ಕೆ ನೀಡಿದಂತೆಯೇ. ಅದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತದೆ. ಈ ನಿಟ್ಟಿನಲ್ಲಿ ಮಹಾಸಭಾ ಸಮಾಜಮುಖಿ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ’ ಎಂದರು.

ADVERTISEMENT

ಪಾಲ್ಗೊಂಡಿದ್ದ 45 ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.

ಶಿಬಿರಾರ್ಥಿಗಳಾದ ವಿಜಯಾ ದೇವನಗಾವಿ, ಹೀರಾ ಚೌಗುಲೆ, ಮಹಾನಂದಾ ಪರುಶೆಟ್ಟಿ, ಗೀತಾ ಹುಬ್ಬಳ್ಳಿ, ಉಮಾ ಅಂಗಡಿ, ಪೂಜಾ ನಾಯಿಕ, ಸೀಮಾ ಖೋತ, ಶುಭಾ ತೆಲಸಂಗ,ಶೈಲಾ ಪಾಟೀಲ, ಶೈಲಜಾ ಭಿಂಗೆ, ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿದರು. ಪ್ರತಿಭಾ ಕಳ್ಳಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.