ಅತ್ತಲಿತ್ತ ಹೋಗದಂತೆ; ಹೆಳವನ ಮಾಡಯ್ಯ, ತಂದೆ
ಸುತ್ತಿ ಸುಳಿದು ನೋಡದಂತೆ; ಅಂಧಕನ ಮಾಡಯ್ಯ, ತಂದೆ
ಮತ್ತೊಂದ ಕೇಳದಂತೆ; ಕಿವುಡನ ಮಾಡಯ್ಯ, ತಂದೆ
ನಿಮ್ಮ ಶರಣರ ಪಾದವಲ್ಲದೆ
ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ
ಭಗವಂತನ ಈ ಸೃಷ್ಟಿಯಲ್ಲಿ ಮಾನವನು ಸ್ವೆಚ್ಛಾಚಾರಿಯಾಗಿ ಜೀವನ ನಡೆಸುತ್ತಿದ್ದಾನೆ. ಧಾರ್ಮಿಕ ನಂಬಿಕೆ, ದಾರ್ಶನಿಕ ಮನೋಭಾವನೆ ಕಡಿಮೆಯಾಗಿದೆ. ಅವನ ಜೀವನ ಪರಿಪೂರ್ಣವಾಗಬೇಕಾದರೆ ಸಮಾಜ ಸೇವೆ, ಧಾರ್ಮಿಕ ಶ್ರದ್ಧೆ, ಗುರು ಹಿರಿಯರ ಸೇವೆ ಅವಶ್ಯವಾಗಿ ಮಾಡಬೇಕು. ಕ್ಷಣಿಕ ಸುಖದ ವ್ಯಾಮೋಹಕ್ಕೆ ಒಳಗಾಗಿ ಶಾಶ್ವತವಾದ ಆನಂದ ಪಡೆಯುವದನ್ನು ಮರೆತಿದ್ದಾನೆ. ಬಸವಣ್ಣನವರು ಭಗವಂತನ ಸ್ಮರಣೆಯೊಂದೆ ಮಾನವನ ಆದ್ಯತೆಯಾಗಬೇಕೆಂಬುದನ್ನು ಹೀಗೆ ವಿವರಿಸಿದ್ದಾರೆ.
ಕೆಟ್ಟ ಕೆಲಸಗಳನ್ನು ಮಾಡಲು ಹೋಗಬಾರದು. ಹಾಗೇನಾದರು ಹೋಗುವ ಅನಿವಾರ್ಯತೆ ಬಂದರೆ ಕಾಲುಗಳೆ ಇಲ್ಲದಂತೆ ಮಾಡು. ಕೆಟ್ಟ ಕೆಲಸಗಳನ್ನು ನೋಡಬಾರದು ಹಾಗೇನಾದರೂ ನೋಡುವ ಅನಿವಾರ್ಯತೆ ಬಂದರೆ ಅಂಧನನ್ನಾಗಿ ಮಾಡು. ಕೆಟ್ಟ ವಿಷಯಗಳನ್ನು ಕೇಳಬಾರದು ಹಾಗೇನಾದರೂ ಕೇಳುವ ಅನಿವಾರ್ಯತೆ ಬಂದರೆ ಕಿವುಡನನ್ನಾಗಿ ಮಾಡು. ನಿನ್ನ ಸ್ಮರಣೆಯಲ್ಲದೆ ಅನ್ಯ ವಿಷಯಗಳಿಗೆ ಮನಸ್ಸು ಹರಿಯದಂತೆ ರಕ್ಷಿಸು ಎಂದು ಬಸವಣ್ಣ ಅವರು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.
ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.