ಬೆಳಗಾವಿ: ‘ಪರಿಶ್ರಮ ಹಾಗೂ ಶ್ರದ್ಧೆಯಿಂದ ನಿರ್ವಹಿಸಿದ ಕೆಲಸಕ್ಕೆ ಪ್ರತಿಫಲ ದೊರೆಯುತ್ತದೆ. ವಿದ್ಯಾರ್ಥಿಗಳು ನಿಷ್ಠೆಯಿಂದ ಅಭ್ಯಾಸ ಮಾಡಿದರೆ ಸಫಲತೆ ಕಾಣಬಹುದು’ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಾಲೇಜು ಅಭಿವೃದ್ಧಿ ಘಟಕದ ನಿರ್ದೇಶಕ ಎಸ್.ಎಂ. ಹುರಕಡ್ಲಿ ಹೇಳಿದರು.
ಇಲ್ಲಿನ ಲಿಂಗರಾಜ ಪದವಿ ಕಾಲೇಜಿನಲ್ಲಿ ಸೋಮವಾರ ನಡೆದ ಪ್ರಶಸ್ತಿ ವಿತರಣೆ ಹಾಗೂ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳ ಜೀವನ ಬಂಗಾರಮಯವಾಗಿದ್ದು, ಅದನ್ನು ಸರಿಯಾಗಿ ಬಳಸಿಕೊಳ್ಳಬೇಕು. ಸತತ ಅಭ್ಯಾಸ ಹಾಗೂ ಪರಿಶ್ರಮದಿಂದ ನಿರ್ದಿಷ್ಟವಾದ ಗುರಿ ತಲುಪಬೇಕು. ಎಡರುತೊಡರುಗಳನ್ನು ಸಮರ್ಥವಾಗಿ ಎದುರಿಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಆರ್.ಎಂ. ಪಾಟೀಲ ಮಾತನಾಡಿ, ‘ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಅದನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು. ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ಈಚೆಗೆ ಪಿಎಚ್.ಡಿ ಪಡೆದ ಕೆಎಲ್ಇ ಸಂಸ್ಥೆಯ ಆಜೀವ ಸದಸ್ಯ ಹಾಗೂ ಲಿಂಗರಾಜ ಬಿಬಿಎ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಕಡಕೋಳ, ಬಿ.ಎಂ. ತೇಜಸ್ವಿ, ಎನ್ಎಸ್ಎಸ್ ಪ್ರಶಸ್ತಿ ಪಡೆದ ಪ್ರೊ.ಎಸ್.ಎನ್. ಮೂಲಿಮನಿ ಮತ್ತು ಸಾಧಕರಾದ ಪ್ರೊ.ವಿನಾಯಕ ವರೂಟೆ, ರಾಘವೇಂದ್ರ ಹಜಗೋಳ್ಕರ, ಪ್ರೊ.ಮಹಾದೇವ ಧರಿಗೌಡರ ಅವರನ್ನು ಸನ್ಮಾನಿಸಲಾಯಿತು.
ಬಿ.ಎ. ವಿಭಾಗದಲ್ಲಿ ಅರುಣ ಲೋಕಣ್ಣವರ ಹಾಗೂ ವರ್ಷಾ ದೇಶಪಾಂಡೆ, ಬಿ.ಕಾಂ.ನಲ್ಲಿ ಸ್ನೇಹಾ ಮಗದುಮ್ಮ, ಗೌರವ ಸಿಂಗ್ ಅವರಿಗೆ ಆದರ್ಶ ವಿದ್ಯಾರ್ಥಿ, ವಿದ್ಯಾರ್ಥಿನಿಯರೆಂದು ಪ್ರಶಸ್ತಿ ನೀಡಲಾಯಿತು.
ಪ್ರಸಾದ್ ಪ್ರಾರ್ಥಿಸಿದರು. ಬಿ.ಎಂ. ತೇಜಸ್ವಿ ಪರಿಚಯಿಸಿದರು. ಗುರುದೇವಿ ಹುಲೆಪ್ಪನವರಮಠ ವಾರ್ಷಿಕ ವರದಿ ಮಂಡಿಸಿದರು. ಪ್ರೊ.ಸಾರಿಕಾ ನಗರೆ, ಪ್ರೊ.ಸರಯೂ ಪೋತ್ನಿಸ್, ನೀತಾ ಗಂಗರೆಡ್ಡಿ ನಿರೂಪಿಸಿದರು. ರವೀಂದ್ರ ಚಿಕ್ಕಮಠ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.