ADVERTISEMENT

ಬೆಳಗಾವಿ | ಶ್ರದ್ಧಾಭಕ್ತಿಯ ‘ವಟ ಸಾವಿತ್ರಿ ವ್ರತ’ ಆಚರಣೆ

ಪೂಜೆ ವೇಳೆ ಅಂತರ ಮರೆತ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 3:12 IST
Last Updated 6 ಜೂನ್ 2020, 3:12 IST
ಉಗಾರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶುಕ್ರವಾರ ಮಹಿಳೆಯರು ಆಲದ ಮರದ ಬದಲಿಗೆ ಸಸಿಗೆ ನೂಲು ಸುತ್ತಿ ವಟ ಸಾವಿತ್ರಿ ವ್ರತದ ಪೂಜೆ ಸಲ್ಲಿಸಿದರು
ಉಗಾರದಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಶುಕ್ರವಾರ ಮಹಿಳೆಯರು ಆಲದ ಮರದ ಬದಲಿಗೆ ಸಸಿಗೆ ನೂಲು ಸುತ್ತಿ ವಟ ಸಾವಿತ್ರಿ ವ್ರತದ ಪೂಜೆ ಸಲ್ಲಿಸಿದರು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಿಳೆಯರು ಶುಕ್ರವಾರ ‘ವಟ ಸಾವಿತ್ರಿ ವ್ರತ’ವನ್ನು ಶ್ರದ್ಧಾ–ಭಕ್ತಿಯಿಂದ ಆಚರಿಸಿದರು.

ಪತಿ ಸತ್ಯವಾನ್‌ನನ್ನು ಉಳಿಸಿಕೊಳ್ಳಲು ಯಮನನ್ನು ಮೆಚ್ಚಿಸಿದ ಸಾವಿತ್ರಿಯ ನೆನಪಿಗಾಗಿ ಹುಣ್ಣಿಮೆಯಂದು ವಟ ಸಾವಿತ್ರಿ ವ್ರತವನ್ನು ಮುತ್ತೈದೆಯರು ಆಚರಿಸುವ ಸಂಪ್ರದಾಯ ಈ ಭಾಗದಲ್ಲಿದೆ.

ತಮ್ಮ ಮನೆಗಳ ಸಮೀಪದಲ್ಲಿರುವ ದೇವಸ್ಥಾನಗಳ ಆವರಣದಲ್ಲಿರುವ ಆಲದ ಮರಕ್ಕೆ ಅವರು ಪೂಜೆ ಸಲ್ಲಿಸಿದರು. ಪತಿಗೆ ಆರೋಗ್ಯ ಮತ್ತು ಆಯುಷ್ಯವನ್ನು ಪ್ರಾರ್ಥಿಸಿದರು. ಕೊರೊನಾ ಸೋಂಕಿನ ಭೀತಿಯಿಂದಾಗಿ ದೇವಸ್ಥಾನಗಳಲ್ಲಿ ಪೂಜೆಗೆ ಅವಕಾಶವಿರಲಿಲ್ಲ. ಹೀಗಾಗಿ, ಆಲದ ಮರದ ಆವರಣದಲ್ಲೇ ಪೂಜಿ ಸಲ್ಲಿಸುತ್ತಿದ್ದುದು ಕಂಡುಬಂತು. ಮರಕ್ಕೆ ನೂಲು ಸುತ್ತುವಾಗ ಅವರು ಅಂತರ ಮರೆತರು. ಬಹುತೇಕರು ಮುಖಗವಸು ಧರಿಸಿರಲಿಲ್ಲ.

ADVERTISEMENT

ಶಾಹೂನಗರದ ಶಿವಾಲಯ, ಕಪಿಲೇಶ್ವರ ಮಂದಿರ ಆವರಣ, ರಾಣಿ ಚನ್ನಮ್ಮ ವೃತ್ತದ ಗಣೇಶ ಮಂದಿರ ಮೊದಲಾದ ಕಡೆಗಳಲ್ಲಿ ಮಹಿಳೆಯರು ಆಲದ ಮರಕ್ಕೆ ಭಕ್ತಿಭಾವದಿಂದ ನೂಲನ್ನು ಸುತ್ತುತ್ತಾ ಪ್ರದಕ್ಷಿಣೆ ಹಾಕುವ ಮೂಲಕ ಪೂಜೆ ಸಲ್ಲಿಸಿದರು. ಕೊರೊನಾ ಭೀತಿಯಿಂದಾಗಿ ಈ ಬಾರಿ ಮಹಿಳೆಯರು ಸಂಖ್ಯೆ ಕಡಿಮೆ ಇತ್ತು.

ಮೋಳೆ ವರದಿ: ಇಲ್ಲಿ ಮುತ್ತೈದೆಯರು ತಮ್ಮ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲೆಂದು ಪ್ರಾರ್ಥಿಸಿ ವಟ ಸಾವಿತ್ರಿ ವ್ರತ ಆಚರಿಸಿದರು.

ಕಾಗವಾಡ ತಾಲ್ಲೂಕಿನ ಉಗಾರದಲ್ಲಿ ದೊಡ್ಡ ಆಲದ ಮರದ ಬದಲಿಗೆ ಚಿಕ್ಕ ಆಲದ ಸಸಿ ಪೂಜಿಸಿದರು. ಪಾಟ್‌ನಲ್ಲಿದ್ದ ಸಸಿಗೆ ಅಂತರ ಕಾಯ್ದುಕೊಳ್ಳುವ ಮೂಲಕ ನೂಲು ಸುತ್ತಿ ನಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.