ಬೆಳಗಾವಿ: ನೇಕಾರರು ಸಿದ್ಧಪಡಿಸಿರುವ 15 ಲಕ್ಷ ಸೀರೆಗಳನ್ನು ಸರ್ಕಾರದಿಂದಲೇ ಖರೀದಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೇಕಾರರ ವೇದಿಕೆ ಜಿಲ್ಲಾ ಘಟಕದವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
‘ಕೋವಿಡ್ ಲಾಕ್ಡೌನ್ನಿಂದಾಗಿ ಸೀರೆಗಳ ಮಾರಾಟವಾಗದೆ ನಾವು ಸಂಕಷ್ಟಕ್ಕೆ ಒಳಗಾಗಿದ್ದೇವೆ. ನೇಕಾರರಿಂದ ಸೀರೆಗಳನ್ನು ಖರೀದಿಸಲಾಗುವುದು ಎಂದು ಸರ್ಕಾರವೇ ಹೇಳಿತ್ತು. ಆದರಂತೆ ತಕ್ಷಣದಿಂದಲೇ ಕಾರ್ಯಪ್ರವೃತ್ತರಾಗಬೇಕು’ ಎಂದು ಒತ್ತಾಯಿಸಿದರು.
ಮುಖಂಡ ಪರಶುರಾಮ ಢಗೆ ಮಾತನಾಡಿ, ‘ಜಿಲ್ಲೆಯೊಂದರಲ್ಲೇ ನೇಕಾರರು ಉತ್ಪಾದಿಸಿರುವ 15 ಲಕ್ಷ ಸೀರೆಗಳು ಮಾರಾಟವಾಗದೆ ಉಳಿದಿವೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಭರವಸೆ ನೀಡಿದ್ದರೂ ಸ್ಪಂದನೆ ದೊರೆತಿಲ್ಲದಿರುವುದು ವಿಷಾದನೀಯ. ಜವಳಿ ಇಲಾಖೆ ತಪ್ಪು ಮಾಹಿತಿ ನೀಡಿದ ಕಾರಣ ಸೀರೆಗಳನ್ನು ಖರೀದಿಸಲಾಗುತ್ತಿಲ್ಲ ಎನ್ನಲಾಗುತ್ತಿದೆ. ಏನೇ ಸಮಸ್ಯೆಗಳಿದ್ದರೂ ಸರ್ಕಾರ ಬಗೆಹರಿಸಿ, ನೇಕಾರರಿಗೆ ಸಹಾಯಹಸ್ತ ಚಾಚಬೇಕು’ ಎಂದು ಕೋರಿದರು.
ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಪಾಂಡುರಂಗ ಧೋತ್ರೆ, ಮುಖಂಡರಾದ ರಮೇಶ ಸೋಂಟಕ್ಕಿ, ಶ್ರೀನಿವಾಸ ತಾಳೂಕರ, ನಾರಾಯಣ ಕಾಮಕರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.