ಬೆಳಗಾವಿ: ‘ಆಧುನಿಲ ಕೃಷಿಯಲ್ಲಿ ಸಾಕಷ್ಟು ಸಂಶೊಧನೆಗಳು ನಡೆದಿವೆ. ನೂತನ ಪದ್ಧತಿ ಅಳವಡಿಕೆ, ಸಂಶೋಧನಾ ಮಾಹಿತಿ ಮತ್ತು ಸಮಗ್ರ ಕೃಷಿ ಅಳವಡಿಕೆಯ ಮೂಲಕ ರೈತರು ಕೃಷಿಯನ್ನು ಲಾಭದಾಯಕ ಉದ್ಯಮವಾಗಿ ನೋಡಬೇಕು’ ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಸಲಹೆ ನೀಡಿದರು.
ಐಸಿಎಆರ್– ಕೆಎಲ್ಇ ಕೃಷಿ ವಿಜ್ಞಾನ ಕೇಂದ್ರ, ಭಾರತೀಯ ಕೃಷಿ ಅನುಸಂಧಾನ ಪರಿಷತ್, ಕೃಷಿ ಇಲಾಖೆ, ಇಫ್ಕೋ ಸಂಸ್ಥೆ, ಹಾಗೂ ಮರಕುಂಬಿಯ ಇನಾಂದಾರ ಶುಗರ್ಸ್ ಲಿಮಿಟೆಡ್ ಆಶ್ರಯದಲ್ಲಿ ಮರಕುಂಬಿ ಗ್ರಾಮದಲ್ಲಿ ಗುರುವಾರ ‘ವಿಕಸಿತ ಕೃಷಿ ಸಂಕಲ್ಪ ಅಭಿಯಾನ’ಕ್ಕೆ ಚಾಲನೆ ನೀಡಿ ಮಾತನಾಡಿದರು.
‘ರೈತರು ಒಂದೇ ಬೆಳೆಗೆ ಜೋತು ಬೀಳದೇ ಹಲವು ಬೆಳೆಗಳನ್ನು ಬೆಳೆದು ಅವುಗಳಿಗೆ ಮೌಲ್ಯವರ್ಧನೆ ಮಾಡಿ ಲಾಭಗಳಿಸಬೇಕು’ ಎಂದರು.
ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಎಸ್. ಪಾಟೀಲ ಮಾತನಾಡಿ, ‘ರೈತರು ಡಿಎಪಿ ಗೊಬ್ಬರಕ್ಕೆ ದುಂಬಾಲು ಬೀಳದೆ ಲಭ್ಯವಿರುವ ಸಂಯುಕ್ತ ಗೊಬ್ಬರಗಳನ್ನು ಬಳಸಿಕೊಂಡು ಇಳುವರಿ ಹೆಚ್ಚಿಸಬೇಕು. ಕೃಷಿ ಇಲಾಖೆ ಮೂಲಕ ನೀಡಲಾಗುವ ಗುಣಮಟ್ಟದ ಬೀಜಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಿ ಉತ್ತಮ ಇಳುವರಿ ಪಡೆಯಲು ಪ್ರಯತ್ನಿಸಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಕಾರ್ಯಾಧ್ಯಕ್ಷ, ಕೆಎಲ್ಇ ಸಂಸ್ಥೆಯ ನಿರ್ದೇಶಕ ಬಿ.ಆರ್. ಪಾಟೀಲ ಮಾತನಾಡಿ, ‘ಕೆವಿಕೆ ಮೂಲಕ ಇಡೀ ಕೃಷಿ ವಿಜ್ಞಾನದ ಸಮುದಾಯ, ಕೃಷಿ ಇಲಾಖೆ ಹಾಗೂ ಇಫ್ಕೋ ಸಂಸ್ಥೆ ಅಧಿಕಾರಿಗಳು ಗ್ರಾಮಕ್ಕೆ ಬಂದಿದ್ದು, ಅವರೊಂದಿಗೆ ಚರ್ಚಿಸಿ ಗುಣಮಟ್ಟದ ಮಾಹಿತಿ ಪಡೆಯಬೇಕು. ಅದನ್ನು ಅಳವಡಿಸಿಕೊಂಡು ಲಾಭದಾಯಕ ಕೃಷಿಯಾಗಿ ಪರಿವರ್ತಿಸಬೇಕು’ ಎಂದು ಕೋರಿದರು.
ಮುಖ್ಯ ಅತಿಥಿಗಳಾಗಿ ಭಾರತೀಯ ಕೃಷಿ ಅನುಸಂಧಾನ ಪರಿಷತ್ನ ಡಾ.ಭಗತ್ ಮತ್ತು ಡಾ.ಮಹೇಂದಿರನ್, ಇನಾಂದಾರ ಶುಗರ್ಸ್ ನಿರ್ದೇಶಕ ವಿಜಯ ಮೆಟಗುಡ್ಡ, ಪಿಕೆಪಿಎಸ್ ಅಧ್ಯಕ್ಷ ಕಾರ್ತಿಕಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ ಸಿ.ಐ. ಹೂಗಾರ ಇದ್ದರು. ಕೆವಿಕೆ ಮುಖ್ಯಸ್ಥ ಮಂಜುನಾಥ ಚೌರಡ್ಡಿ ಪರಿಚಯ ನೀಡಿದರು.
ಎಸ್.ಎಂ. ವಾರದ ಹಾಗೂ ಜಿ.ಬಿ. ವಿಶ್ವನಾಥ, ಬಾಳೇಶ ಶೇಗುಣಶಿ ಮತ್ತು ಎಂ.ಡಿ. ಪಟ್ಟಣಶೆಟ್ಟಿ ಇದ್ದರು.ಕೃಷಿ ತಂತ್ರಜ್ಞಾನ ಹಾಗೂ ನ್ಯಾನೋ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ವಿಜ್ಞಾನಿಗಳು ರೈತರೊಂದಿಗೆ ಸಂವಾದ ನಡೆಸಿದರು.
Highlights - ರೈತರೊಂದಿಗೆ ವಿಜ್ಞಾನಿಗಳ ಸಂವಾದ ಒಂದೇ ಬೆಳೆಗೆ ಜೋತು ಬೀಳದಿರಲು ಸಲಹೆ ಸಂಯುಕ್ತ ಗೊಬ್ಬರಗಳನ್ನು ಬಳಸಿಕೊಳ್ಳಲು ಕಿವಿಮಾತು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.