ಬೆನಕಟ್ಟಿ (ಬೆಳಗಾವಿ ಜಿಲ್ಲೆ): ಸೇನೆಯಲ್ಲಿ 26 ವರ್ಷಗಳು ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ವಾಪಸಾದಸಮೀಪದ ಮಬನೂರ ಗ್ರಾಮದ ಮಾರುತಿ ಗಂಗಪ್ಪ ಅಪ್ಪಣ್ಣವರ ಅವರನ್ನು ಗ್ರಾಮಸ್ಥರು ಮೆರವಣಿಗೆಯಲ್ಲಿ ಅದ್ಧೂರಿಯಾಗಿ ಬರಮಾಡಿಕೊಂಡರು.
ಸನ್ಮಾನಿಸಿ ಮಾತನಾಡಿದ ಮುನವಳ್ಳಿ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ, ‘ಗಡಿ ಕಾಯುವ ಸೈನಿಕನ ರೆಟ್ಟೆಗೆ ಶಕ್ತಿ ಬರಲಿ. ರೈತರಿಗೆ ಒಳಿತಾಗಲಿ. ಬೆಳೆಗಳಿಗೆ ಉತ್ತಮ ಬೆಲೆ ಸಿಗಲಿ ಎಂದು ನಾವೆಲ್ಲರೂ ನಿತ್ಯವೂ ದೇವರಲ್ಲಿ ಪ್ರಾರ್ಥಿಸಬೇಕು. ಕುಟುಂಬದಿಂದ ದೂರವಿದ್ದು ಪ್ರಾಣದ ಹಂಗು ತೊರೆದು ನಮ್ಮೆಲ್ಲರ ರಕ್ಷಣೆಗಾಗಿ ಹೋರಾಡುವ ಸೈನಿಕ ಹಾಗೂ ಅನ್ನ ಕೊಡುವ ರೈತರನ್ನು ಗೌರವಿಸಬೇಕು’ ಎಂದರು.
‘ಸೈನಿಕ, ರೈತ, ಶಿಕ್ಷಕ ಹಾಗೂ ವೈದ್ಯರು ದೇಶದ ಬೆನ್ನೆಲುಬು. ಅವರಿಗೆ ಗೌರವ ನೀಡುವುದು ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು’ ಎಂದು ತಿಳಿಸಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಪಂಚನಗೌಡ ದ್ಯಾಮನಗೌಡರ, ‘ನಾವಿಲ್ಲಿ ನಿರಾತಂಕವಾಗಿ ಜೀವನ ಮಾಡುತ್ತಿರುವುದಕ್ಕೆ ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರು ಕಾರಣ. ಯುವಜನರು ಸೈನ್ಯಕ್ಕೆ ಸೇರಲು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು’ ಎಂದರು.
ನಿವೃತ ಯೋಧ ಕುಮಾರ ಹಿರೇಮಠ ಮಾತನಾಡಿದರು. ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯರಾದ ಪುಂಡಲೀಕ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಫಕೀರಪ್ಪ ಹದ್ದನ್ನವರ, ವಿನಯಕುಮಾರ ದೇಸಾಯಿ, ಮಹಾದೇವ ಪಟಾತ, ವಿಠ್ಠಲ ಅಗಸಿಮನಿ, ವಿಠ್ಠಲ ಚುಂಚನೂರ, ಪಡೆಪ್ಪ ನರಿ, ಯಲ್ಲಪ್ಪ ನರಿ, ಬಸಪ್ಪ ನೇಗಿನಾಳ, ಮುತ್ತೆಪ್ಪ ಮೇಟಿ, ಭೀಮಪ್ಪ ಮೇಟಿ, ಮಹಾದೇವ ಮುರಗೋಡ, ನಿಂಗಪ್ಪ ಮೇಟಿ, ವಿಠ್ಠಲ ಹೊನಕುಪ್ಪಿ, ಶಿವಪ್ಪ ಮೇಟಿ, ಸುರೇಶ ಬಾಳಿಕಾಯಿ ಪಾಲ್ಗೊಂಡಿದ್ದರು.
ಕೊರೊನಾ ಸೇನಾನಿಗಳು ಮತ್ತು ನಿವೃತ್ತ ಯೋಧರನ್ನು ಸತ್ಕರಿಸಲಾಯಿತು. ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.
ಬಿ.ಎಸ್. ಪಟಾತ ನಿರೂಪಿಸಿದರು. ಅಶೋಕ ಬಡಿಗೇರ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.