ಬೆಳಗಾವಿ: ‘ವಿಶ್ವ ಗುರು ಬಸವಣ್ಣ ವಿಶಿಷ್ಟ ಪ್ರವಾದಿಯಾಗಿದ್ದಾರೆ’ ಎಂದು ರಾಷ್ಟ್ರೀಯ ಬಸವ ದಳದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಬಸವರಾಜ ಹೇಳಿದರು.
ಲಿಂಗಾಯತ ಧರ್ಮ ಮಹಾಸಭಾ ಜಿಲ್ಲಾ ಘಟಕ, ರಾಷ್ಟ್ರೀಯ ಬಸವ ದಳ, ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣ, ಗಣಾಚಾರ ದಳ, ವಚನ ಚಿಂತನಾ ವೇದಿಕೆ ಮತ್ತು ಚಿಣ್ಣರ ಬಸವಾಂಕುರ ಸಹಯೋಗದಲ್ಲಿ ಭಾನುವಾರ ಆರಂಭವಾದ ‘ದಸರಾ ಹಬ್ಬವನ್ನು ಕಲ್ಯಾಣ ಕ್ರಾಂತಿ ಸಂಸ್ಮರಣೆ’ಯಾಗಿ ಆಚರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಚನಗಳು ಧಾರ್ಮಿಕ ಜಗತ್ತಿಗೆ ಸೀಮಿತಗೊಳ್ಳದೇ ಮನುಷ್ಯನ ಸಮಗ್ರ ಬೆಳವಣಿಗೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ನೈತಿಕ ಹೀಗೆ ಹತ್ತಾರು ವಿಷಯಗಳ ಬಗ್ಗೆಯೂ ಸಂದೇಶ ನೀಡಿವೆ. ಅಂದಿನ ಕಾಲದಲ್ಲೇ ಬಸವಣ್ಣನವರು ಸ್ತ್ರೀ ಸಬಲೀಕರಣಕ್ಕೆ ನಾಂದಿ ಹಾಡಿದರು. ಸಕಲ ಜೀವಾತ್ಮರಿಗೆ ಲೇಸು ಬಯಸುವವನೇ ಶರಣ ಎನ್ನುವ ಮೂಲಕ ಎಲ್ಲರನ್ನೂ ಪ್ರೀತಿಸುವ ಸೂತ್ರವನ್ನು ತೆರೆದಿಟ್ಟರು. ಇಷ್ಟಲಿಂಗವೆಂಬ ಜಾತಿ ರಹಿತ ಹೊಸ ಜ್ಯೋತಿಯ ಮೂಲಕ ಮಾನವರನ್ನು ಪಾವನಗೊಳಿಸಿದರು. ಕಾಯಕ, ದಾಸೋಹ ಮತ್ತು ಪ್ರಸಾದ ತತ್ವಗಳ ಮೂಲಕ ಗಳಿಕೆ ಮತ್ತು ಖರ್ಚಿಗೆ ಹೊಸ ಆಯಾಮ ನೀಡಿದರು’ ಎಂದು ಸ್ಮರಿಸಿದರು.
ಅತಿಥಿಯಾಗಿದ್ದ ಡಾ.ಸಂಗಮೇಶ್ವರ ಮೋತಿಮಠ ಬಸವ ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರೀಯ ಬಸವ ದಳ ಜಿಲ್ಲಾ ಘಟಕದ ಉಪಾಧ್ಯಕ್ಷ ಅಶೋಕ ಬೆಂಡಿಗೇರಿ ಮಾತನಾಡಿದರು.
ಶರಣಪ್ರಸಾದವಾರದ ಸಾಮೂಹಿಕ ಇಷ್ಟಲಿಂಗಾರ್ಚನೆ ಮತ್ತು ಪ್ರಾರ್ಥನೆ ನೆರವೇರಿಸಿದರು. ಅನ್ನಪೂರ್ಣಾ ರಾಂಪುರೆ ಪೂಜೆ ಸಲ್ಲಿಸಿದರು. ಮಾರಯ್ಯ ಗಡಗಲಿ ಸ್ವಾಗತಿಸಿದರು. ರೂಪಾ ಪ್ರಸಾದ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.