ಬೆಳಗಾವಿ: ‘ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ಸ್ನಾತಕ ಪದವಿ ಕೋರ್ಸ್ಗಳ (ಬಿ.ಇ, ಬಿ.ಆರ್ಕ್., ಬಿ.ಪ್ಲಾನ್) ಮೊದಲ ಸೆಮಿಸ್ಟರ್ ಪರೀಕ್ಷೆಗಳನ್ನು ಶೈಕ್ಷಣಿಕ ಅಗತ್ಯತೆಯ ದೃಷ್ಟಿಯಿಂದಾಗಿ ಪೂರ್ಣಗೊಳಿಸಲೇಬೇಕಿದೆ. ಈಗಾಗಲೇ ಪ್ರಕಟಿಸಿರುವ ಅಧಿಸೂಚನೆಯಲ್ಲಿನ ವೇಳಾಪಟ್ಟಿಯಂತೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ನಡೆಸಲಾಗುವುದು’ ಎಂದು ಕುಲಸಚಿವ ಪ್ರೊ.ಎ.ಎಸ್. ದೇಶಪಾಂಡೆ ತಿಳಿಸಿದ್ದಾರೆ.
‘ಕೋವಿಡ್–19 ಸಾಂಕ್ರಾಮಿಕದ ಕಾರಣದಿಂದಾಗಿ ಅನಿವಾರ್ಯವಾಗಿ ಯಾರಾದರೂ ತಪ್ಪಿಸಿಕೊಂಡರೆ, ಅಂಥವರನ್ನು 2ನೇ ಸೆಮಿಸ್ಟರ್ಗೆ ಕಳುಹಿಸಲಾಗುವುದು. ಅವರು ಬಾಕಿ ಉಳಿಸಿಕೊಂಡಿರುವ ವಿಷಯದ ಪರೀಕ್ಷೆಯನ್ನುಮುಂಬರುವ ಸೆಮಿಸ್ಟರ್ ಪರೀಕ್ಷೆ ಜೊತೆ ತೆಗೆದುಕೊಳ್ಳಬೇಕಾಗುತ್ತದೆ. ಅದನ್ನು ಮೊದಲ ಪ್ರಯತ್ನವೆಂದು ಪರಿಗಣಿಸಲಾಗುವುದು. ಈ ಅವಕಾಶವನ್ನು ಬಿ.ಇ, ಬಿ.ಆರ್ಕ್., ಬಿ.ಪ್ಲಾನ್ ಕೋರ್ಸ್ನ ರೆಗ್ಯುಲರ್ ವಿದ್ಯಾರ್ಥಿಗಳಿಗೆ ಮಾತ್ರವೇ ಕಲ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ಈಗಾಗಲೇ 2 ವಿಷಯಗಳ ಪರೀಕ್ಷೆಗಳು ಮುಗಿದಿದ್ದು, ಶೇ 98ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಇನ್ನು 4 ವಿಷಯಗಳು ಉಳಿದಿವೆ. ಪರೀಕ್ಷೆ ಮುಗಿಸುವುದರಲ್ಲಿ ವಿಳಂಬವಾದರೆ ಇಡೀ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು ಮತ್ತು ಈಗಾಗಲೇ 4 ತಿಂಗಳುಗಳು ವಿಳಂಬ ಆಗಿರುವುದರಿಂದ ಮತ್ತೆ ಮುಂದೂಡಿದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆ ಆಗುತ್ತದೆ. ಹೀಗಾಗಿ, ಪರೀಕ್ಷೆಯನ್ನು ಗಂಭಿರವಾಗಿ ಪರಿಗಣಿಸಬೇಕು. ಉತ್ತಮವಾಗಿ ಅಭ್ಯಾಸ ಮಾಡಿ ಎದುರಿಸಬೇಕು. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಬೇಕು’ ಎಂದು ಸಲಹೆ ನೀಡಿದ್ದಾರೆ.
‘ಕೋವಿಡ್ ಲಕ್ಷಣವಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.