ADVERTISEMENT

ಪರಿಸರ ಸಂಪತ್ತನ್ನು ಸರಿಯಾಗಿ ನಿರ್ವಹಿಸಿದರೆ ಉಳಿಗಾಲ: ಪ್ರೊ.ಜಿ.ಕೆ. ಖಡಬಡಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 13:27 IST
Last Updated 5 ಜುಲೈ 2021, 13:27 IST

ಬೆಳಗಾವಿ: ‘ಸಾಮಾಜಿಕ, ಆರ್ಥಿಕ ಸೇರಿದಂತೆ ಎಲ್ಲ ಬೆಳವಣಿಗೆಗೆ ಪರಿಸರವೇ ಮೂಲವಾಗಿದೆ. ಆ ಸಂಪತ್ತನ್ನು ಸರಿಯಾಗಿ ನಿರ್ವಹಿಸಿದರೆ ಮಾತ್ರ ನಮಗೆಲ್ಲರಿಗೂ ಉಳಿಗಾಲವಿದೆ’ ಎಂದು ಪರಿಸರ ಮಿತ್ರ ಸಂಘಟನೆ ಅಧ್ಯಕ್ಷ ಪ್ರೊ.ಜಿ.ಕೆ. ಖಡಬಡಿ ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ತಾಲ್ಲೂಕು ಘಟಕಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಪರಿಸರ ಮಾಲಿನ್ಯ ನಿರ್ವಹಣೆ’ ಕುರಿತ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

‘ನೀರು, ಭೂಮಿ, ಅರಣ್ಯ, ಗಾಳಿ ಹೊಂದಿರುವ ಪರಿಸರ ಶೇ 90ರಷ್ಟು ಮಲಿನವಾಗುತ್ತಿರುವುದು ಮಾನವನಿಂದಲೇ. ಇದನ್ನು ತಪ್ಪಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಮಳೆ ನೀರು ಸಂಗ್ರಹ, ಇಂಗುಗುಂಡಿ ನಿರ್ಮಾಣದಿಂದ ಅಂತರ್ಜಲ ಮಟ್ಟ ಹೆಚ್ಚಿಸಬಹುದು. ವಾಹನಗಳ ಮಿತಿ ಮೀರಿದ ಬಳಕೆಯಿಂದಾಗಿ ವಾಯು ಮಾಲಿನ್ಯವೂ ಹೆಚ್ಚಾಗುತ್ತಿದೆ’ ಎಂದು ವಿಷಾದಿಸಿದರು.

‘ಜೈವಿಕ ಇಂಧನ ಮತ್ತು ಸೌರಶಕ್ತಿಯನ್ನು ಹೆಚ್ಚಾಗಿ ಬಳಸಬೇಕು. ಕೃಷಿಯಲ್ಲಿ ಸಾವಯವ ಗೊಬ್ಬರಕ್ಕೆ ಆದ್ಯತೆ ಕೊಡಬೇಕು’ ಎಂದರು.

ಕಸಾಪ ಚನ್ನಮ್ಮನ ಕಿತ್ತೂರು ತಾಲ್ಲೂಕು ಘಟಕದ ಅಧ್ಯಕ್ಷ ಡಾ.ಶೇಖರ ಹಲಸಗಿ, ‘ಪರಿಸರವನ್ನು ಮರೆತರೆ ಉಳಿಗಾಲವಿಲ್ಲ ಎನ್ನುವ ಪ್ರಜ್ಞೆ ಎಲ್ಲರ‌ಲ್ಲೂ ಬರಬೇಕು. ಎಲ್ಲ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದು ತಿಳಿಸಿದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ, ‘ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಬೇಕು’ ಎಂದು ಹೇಳಿದರು.

ಸಾಹಿತಿಗಳಾದ ಬಸವರಾಜ ಗಾರ್ಗಿ, ಹೇಮಾವತಿ ಸೊನೊಳ್ಳಿ, ಎಂ.ಎಸ್. ಹೊಂಗಲ, ಶಿವಾನಂದ ತಲ್ಲೂರ, ರಜನಿ ಜೀರಗ್ಯಾಳ, ಶೈಲಜಾ ಮಸೂತಿ, ವೈ.ಎಂ. ಯಾಕೊಳ್ಳಿ, ಪಾಂಡುರಂಗ ಯಲಿಗಾರ, ಗುರುದೇವಿ ಹುಲೆಪ್ಪನವರಮಠ, ಅನ್ನಪೂರ್ಣಾ ಕನೋಜ, ಕಮಲಾಕ್ಷಿ ಭಾವಿಹಾಳ, ಜಿ.ಪಿ. ಪನ್ನೂರಿ, ಪತ್ರಕರ್ತ ಮುರಗೇಶ ಶಿವಪೂಜಿ, ಬಸವರಾಜು, ಸುರೇಶ ಮರಿಲಿಂಗಣ್ಣವರ ಭಾಗವಹಿಸಿದ್ದರು.

ಪಾಂಡುರಂಗ ಜಟಗನ್ನವರ ಸಂಯೋಜಿಸಿದರು. ಸವದತ್ತಿ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಬಿ. ದೊಡಗೌಡರ ಸ್ವಾಗತಿಸಿದರು. ಜಿಲ್ಲಾ ಘಟಕದ ಕಾರ್ಯದರ್ಶಿ ಎಂ.ವೈ. ಮೆಣಸಿನಕಾಯಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.