ADVERTISEMENT

ಕಣದಲ್ಲಿರುವ ನಮ್ಮವರನ್ನು ಗೆಲ್ಲಿಸಿಕೊಳ್ಳುತ್ತೇವೆ: ಲಕ್ಷ್ಮಣ ಸವದಿ

‘ಸಮಯದ ಅಭಾವದಿಂದಾಗಿ ಮನವೊಲಿಕೆ ಸಾಧ್ಯವಾಗಲಿಲ್ಲ’

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2020, 12:29 IST
Last Updated 31 ಅಕ್ಟೋಬರ್ 2020, 12:29 IST
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ   

ಬೆಳಗಾವಿ: ‘ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 13 ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ. ಉಳಿದ ಮೂರು ಕ್ಷೇತ್ರಗಳಲ್ಲಿ ಸಮಯದ ಅಭಾವದಿಂದಾಗಿ ಅಭ್ಯರ್ಥಿಗಳ ಮನವೊಲಿಸುವುದು ಸಾಧ್ಯವಾಗಲಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು.

‘ನ. 6ರಂದು ಮತದಾನ ನಡೆಯಲಿದ್ದು, ಆಗ ಖಾನಾಪುರ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಅರವಿಂದ ಪಾಟೀಲ, ರಾಮದುರ್ಗದಿಂದ ಶ್ರೀಕಾಂತ ಢವಳ ಹಾಗೂ ನೇಕಾರರ ಸಹಕಾರ ಸಂಘಗಳ ಕ್ಷೇತ್ರದಿಂದ ಗಜಾನನ ನಿಂಗಪ್ಪ ಕ್ವಳ್ಳಿ ಅವರನ್ನು ಬೆಂಬಲಿಸಲಿದ್ದೇವೆ. ಸಾಮೂಹಿಕವಾಗಿ ಮತ ಹಾಕುವ ಮೂಲಕ ಅವರನ್ನು ಗೆಲ್ಲಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ವಿಷಯದಲ್ಲೂ ಮುಖಂಡರೆಲ್ಲರೂ ಒಟ್ಟಾಗಿ ಹೋಗುತ್ತೇವೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಶಾಸ್ತ್ರಕ್ಕೆ ಎನ್ನುವಂತೆ ಈ ಮತದಾನ ನಡೆಯುತ್ತಿದೆಯಷ್ಟೆ. ನಾಮಪತ್ರ ವಾಪಸ್‌ ತೆಗೆದುಕೊಳ್ಳುವವರಿಗೆ ಸಮಯವಿರಲಿಲ್ಲ. ಹೀಗಾಗಿ, ಉಳಿದಿದ್ದಾರೆ. ಇದರಲ್ಲಿ ನಮಗೆ ಹಿನ್ನಡೆ ಪ್ರಶ್ನೆ ಇಲ್ಲ. ಎಲ್ಲರಿಗೂ ಆಸೆ–ಆಕಾಂಕ್ಷೆ ಇರುತ್ತದೆ ಸ್ಪರ್ಧಿಸಿದ್ದಾರೆ’ ಎಂದರು.

ADVERTISEMENT

‘ಅವರಿಂದ ಅಥವಾ ಇವರಿಂದ ನಾಮಪತ್ರ ವಾಪಸ್ ತೆಗೆಸಬಹುದಿತ್ತು ಎನ್ನುವ ಗೊಂದಲ ಇಲ್ಲ. ಕೆಲವರು ಕಾಂಗ್ರೆಸ್ ಬೆಂಬಲಿಗರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಲ್ಲಿ ಪಕ್ಷದ ಪ್ರಶ್ನೆ ಇಲ್ಲ. ಒಟ್ಟಾರೆ ಬ್ಯಾಂಕ್‌ನ ಹಿತದೃಷ್ಟಿಯಿಂದ ನಿರ್ಧರಿಸಿದ್ದೇವೆ. ಹಿಂದಿದ್ದ 16 ನಿರ್ದೇಶಕರಲ್ಲಿ 14 ಮಂದಿ ಮುಂದುವರಿಸಬೇಕು ಎಂದು ತೀರ್ಮಾನಿಸಲಾಗಿತ್ತು. ಎರಡರಲ್ಲಿ ಬೇರೆ ಬೇರೆ ಕಾರಣದಿಂದ ಬದಲಾವಣೆಯಾಗಿದೆ. ಅಧ್ಯಕ್ಷರ ಆಯ್ಕೆಗೂ ಒಟ್ಟಾಗಿ ಹೋಗಲು ನಿರ್ಧರಿಸುತ್ತೇವೆ’ ಎಂದು ಹೇಳಿದರು.

‘ಖಾನಾಪುರದಲ್ಲಿ ಅರವಿಂದ ಪಾಟೀಲ ಬಿಜೆಪಿಯೂ ಅಲ್ಲ, ಎಂಇಎಸ್ ಕೂಡ ಇಲ್ಲ. ಹೋದ ಚುನಾವಣೆಯಲ್ಲಿ ಯಾರೊಂದಿಗೂ ಗುರುತಿಸಿಕೊಳ್ಳದೆ ಸ್ವತಂತ್ರವಾಗಿ ಗೆದ್ದಿದ್ದರು. ಈಗ ಕಾಂಗ್ರೆಸ್ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್‌ ಸ್ಪರ್ಧೆಯಲ್ಲಿರುವುದರಿಂದ ಕಾಂಗ್ರೆಸ್ ಬಣ್ಣ ಹಚ್ಚಲಾಗುತ್ತಿದೆಯಷ್ಟೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ಎಲ್ಲ ಸ್ಥಾನಗಳ ಅವಿರೋಧ ಆಯ್ಕೆಗಾಗಿ ಒಂದು ವಾರದಿಂದ ಸತತ ಪ್ರಯತ್ನ ಮಾಡಿದ್ದೆವು. ಆದರೆ, ಮೂರು ಕ್ಷೇತ್ರಗಳಲ್ಲಿ ಸಾಧ್ಯವಾಗಿಲ್ಲ. ಅಲ್ಲಿ ನಮ್ಮ ಬೆಂಬಲಿಗರನ್ನು ಗೆಲ್ಲಿಸಿಕೊಳ್ಳುತ್ತೇವೆ. ಇದು ಸಹಕಾರ ಬ್ಯಾಂಕ್ ಇಲ್ಲಿ ಪಕ್ಷ ಅಥವಾ ಜಾತಿ ಬರುವುದಿಲ್ಲ. ಖಾನಾಪುರದವರು ಶಾಸಕರಾಗಿ ಈ ಹಂತಕ್ಕೆ ಹೋಗಬಾರದಿತ್ತು’ ಎಂದರು.

ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ, ಶಾಸಕ ಮಹಾಂತೇಶ ದೊಡ್ಡಗೌಡರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.