ಬೆಳಗಾವಿ: ಇಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರ ಬೃಹತ್ ಮರ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗೋಕಾಕ ತಾಲ್ಲೂಕಿನ ಸುಲಧಾಳ ಗ್ರಾಮದ ರಾಜೇಶ ಸುಲಧಾಳ (25) ಮೃತಪಟ್ಟ ಯುವಕ. ಹಿಂಬದಿ ಕುಳಿತಿದ್ದ ಈತನ ಸ್ನೇಹಿತ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಸ್ ನಿಲ್ದಾಣದಿಂದ ಇಬ್ಬರೂ ಯುವಕರು ಚನ್ನಮ್ಮ ವೃತ್ತದ ಕಡೆಗೆ ಹೊರಟಿದ್ದರು. ಆರ್.ಟಿ.ಒ ಕಚೇರಿ ದಾಟಿ ತುಸು ದೂರ ಬಂದು ರಾಯಣ್ಣ ಸರ್ಕಲ್ ಮೂಲಕ ಹೊರಟಿದ್ದರು. ಅದೇ ಸಮಯಕ್ಕೆ ವೃತ್ತದಲ್ಲಿನ ಮರ ಬುಡಸಮೇತ ಉರುಳಿಬಿತ್ತು. ಕೊಂಬೆಗಳ ಅಡಿ ಸಿಲುಕಿದ ಯುವಕರನ್ನು ರಕ್ಷಿಸಲು ಜನ ಇನ್ನಿಲ್ಲದ ಯತ್ನ ಮಾಡಿದರು. ಅಷ್ಟರಲ್ಲಿ ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಮರದ ಕೊಂಬೆ ಕತ್ತರಿಸಿ ತೆರವು ಮಾಡಿದರು.
ಅಷ್ಟರೊಳಗೆ ಒಬ್ಬ ಪ್ರಾಣ ಬಿಟ್ಟಿದ್ದ. ಶವವನ್ನು ಜಿಲ್ಲಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.