ಬೆಳಗಾವಿ: ಸವದತ್ತಿಯ ಕರಿಕಟ್ಟಿ ಕ್ರಾಸ್ (ಬೈಲಹೊಂಗಲ ರಸ್ತೆ) ಪಕ್ಕದಲ್ಲಿ ನಡೆದಿದ್ದ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸವದತ್ತಿ ತಾಲ್ಲೂಕು ಕಾತ್ರಾಳದ ಅರ್ಜುನ ಗದಿಗೆಪ್ಪ ಕೋಳಿ ಬಂಧಿತ. ಅದೇ ಗ್ರಾಮದ ಶ್ರೀಕಾಂತ ಅಲಿಯಾಸ್ ಕಾಂತು ನಿಂಗಪ್ಪ ಕಳ್ಳಿಮನಿ (24) ಕೊಲೆಯಾದ ವ್ಯಕ್ತಿ. ಬುಧವಾರ ನಸುಕಿನಲ್ಲಿ ಈ ಘಟನೆ ನಡೆದಿತ್ತು.
‘ಅರ್ಜುನ–ಶ್ರೀಕಾಂತ ಇಬ್ಬರೂ ಸ್ನೇಹಿತರಾಗಿದ್ದರು. ಶ್ರೀಕಾಂತ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಹಿನ್ನೆಲೆಯಲ್ಲಿ ಇವರಿಬ್ಬರ ನಡುವೆಯೂ ಗಲಾಟೆ ನಡೆದಿದೆ. ಜೆಸಿಬಿಯಲ್ಲಿ ಕುಳಿತಿದ್ದ ಶ್ರೀಕಾಂತಗೆ ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದಾರೆ. ಕೆಳಗೆ ಬಿದ್ದ ಆತನಿಗೆ ಒದ್ದು, ಪಕ್ಕದಲ್ಲಿದ್ದ ದೊಡ್ಡ ಕಲ್ಲನ್ನು ತಲೆ ಮೇಲೆ ಎರಡು ಬಾರಿ ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಆರೋಪಿಯ ವಿಚಾರಣೆ ನಂತರ ಈ ಮಾಹಿತಿ ತಿಳಿದುಬಂದಿದೆ. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ಎಸ್ಪಿ ಸುಧೀರ್ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ರಾಮದುರ್ಗ ಡಿಎಸ್ಪಿ ಬಿ.ಎಸ್. ಪಾಟೀಲ ಮಾರ್ಗದರ್ಶನದಲ್ಲಿ ಸವದತ್ತಿ ಸಿಪಿಐ ಎಂ.ಪಿ. ಸರವಗೋಳ, ಪಿಎಸ್ಐ ಅಶೋಕ ಚವಾಣ ಹಾಗೂ ಸಿಬ್ಬಂದಿ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.