ADVERTISEMENT

ಅಂತರ್ಜಲದ ಅವಲಂಬನೆ ತಪ್ಪಿಸಿ: ವಿಜಯಭಾಸ್ಕರ್‌

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:53 IST
Last Updated 20 ಮಾರ್ಚ್ 2014, 19:53 IST

ಬೆಂಗಳೂರು: ‘ಅಂತರ್ಜಲದ ಮೇಲಿನ ಅವಲಂಬನೆ­ಯನ್ನು ಕ್ರಮೇಣ ಕಡಿಮೆ ಮಾಡುವುದೇ ಜಲ­ಸಂರಕ್ಷಣೆಗೆ ಇರುವ ಮಾರ್ಗ’ ಎಂದು ಗ್ರಾಮೀಣಾ­ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅಭಿಪ್ರಾಯಪಟ್ಟರು.

ಕೇಂದ್ರೀಯ ಅಂತರ್ಜಲ ಮಂಡಳಿಯು ನಗರ­ದಲ್ಲಿ ಗುರುವಾರ ಆಯೋಜಿಸಿದ್ದ ‘ಜಲ ಸಂರಕ್ಷಣೆ– ಹಿನ್ನೋಟ ಮತ್ತು ಮುನ್ನೋಟ’  ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನೀಡಲಾಗುವ ಅನು­ದಾನವು ನೀರು ಸಂಗ್ರಹಿಸಿಡುವ ಕೃತಕ ಟ್ಯಾಂಕ್‌ಗಳ ನಿರ್ಮಾಣ ಸೇರಿದಂತೆ ನೀರಿನ ಸಂರಕ್ಷಣೆಗೆ ಬಳಕೆಯಾಗುತ್ತಿದೆ. ಈವರೆಗೆ ಸುಮಾರು ₨1 ಸಾವಿರ ಕೋಟಿಯನ್ನು ಈ ಯೋಜನೆಗೆ ಬಳಸಲಾ­ಗಿದೆ’ ಎಂದು ಹೇಳಿದರು.

‘ಕೋಲಾರ, ಚಿಕ್ಕಬಳ್ಳಾಪುರ  ಹಾಗೂ  ಚಿತ್ರ­ದುರ್ಗದ ಹಲವೆಡೆ ನೀರಿನ ಸಮಸ್ಯೆಯು ತೀವ್ರವಾಗಿದ್ದು, ಸಾಮಾನ್ಯ ಜನರು ಎಚ್ಚೆತ್ತು­ಕೊಳ್ಳದೇ ಇದ್ದರೆ ಸಮಸ್ಯೆ ಪರಿಹಾರ ಕಾಣಲು ಸಾಧ್ಯವಿಲ್ಲ’ ಎಂದು ತಿಳಿಸಿದರು.

ಜಿಯೋಲಾಜಿಕಲ್ ಸೊಸೈಟಿ ಆಫ್ ಇಂಡಿ­ಯಾದ ಕಾರ್ಯದರ್ಶಿ ಆರ್.ಎಚ್.ಸಾವುಕಾರ್, ‘ಜೀವಜಲ ಉಳಿಸುವ ಸಲುವಾಗಿ ಹಲವು ಕಾನೂನುಗಳನ್ನು ಜಾರಿಗೊಳಿಸಿದ್ದರೂ, ಅವುಗಳು ಪುಸ್ತಕದಲ್ಲಿ ಹಾಗೇ ಉಳಿದಿದೆ’ ಎಂದರು.

‘ಅರಬ್‌ ದೇಶಗಳಲ್ಲಿ ನೀರಿನ ಸಂರಕ್ಷಣೆಗೆ ನೀಡು­ವಷ್ಟು ಮಹತ್ವವನ್ನು ನಮ್ಮ ದೇಶದಲ್ಲಿ ನೀಡ­ಲಾಗು­ತ್ತಿಲ್ಲ. ನೀರಿನ ಪೋಲಾಗುವಿಕೆಯನ್ನು ತಡೆಯುವು­ದರಿಂದ ಅರ್ಧದಷ್ಟು ನೀರಿನ ಅಭಾವವನ್ನು ತಗ್ಗಿಸಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.