ADVERTISEMENT

ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಗಡುವು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 7:48 IST
Last Updated 13 ಡಿಸೆಂಬರ್ 2012, 7:48 IST
ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಗಡುವು
ಅಂಬೇಡ್ಕರ್ ಪ್ರತಿಮೆ ಸ್ಥಳಾಂತರಕ್ಕೆ ಗಡುವು   

ಬೆಂಗಳೂರು: `ಮೆಟ್ರೊ ರೈಲು ಮಾರ್ಗದ ಕಾಮಗಾರಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಯಾವುದೇ ಧಕ್ಕೆ ಆಗಬಾರದು. ಹಾಗಾಗಿ, ವಿಧಾನಸೌಧ ಎದುರಿನಲ್ಲಿರುವ ಅಂಬೇಡ್ಕರ್ ಪ್ರತಿಮೆಯನ್ನು ಇನ್ನು 15 ದಿನಗಳಲ್ಲಿ ತಾತ್ಕಾಲಿಕವಾಗಿ ಬೇರೆಡೆಗೆ ಸ್ಥಳಾಂತರಿಸಬೇಕು' ಎಂದು ಹೈಕೋರ್ಟ್ ಬುಧವಾರ ಸರ್ಕಾರಕ್ಕೆ ಆದೇಶಿಸಿದೆ.

`ಅಂಬೇಡ್ಕರ್ ಪ್ರತಿಮೆ ಸ್ಥಳಾಂತರ ವಿಳಂಬ ಆಗುತ್ತಿರುವ ಕಾರಣ, ವಿಧಾನಸೌಧ ಎದುರು ಮೆಟ್ರೊ ರೈಲು ಮಾರ್ಗದ ಕಾಮಗಾರಿಯೂ ನಿಧಾನವಾಗಿ ಸಾಗುತ್ತಿದೆ. ಕಾಮಗಾರಿ ವೆಚ್ಚ ಕೂಡ ಹೆಚ್ಚುತ್ತದೆ. ಪ್ರತಿಮೆಯನ್ನು ಸ್ಥಳಾಂತರ ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು' ಎಂದು ಕೋರಿ ವಕೀಲ ಎ.ವಿ. ಅಮರನಾಥನ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಾದ ವಿಕ್ರಮಜಿತ್ ಸೇನ್ ಮತ್ತು ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ, `ಸ್ಥಳಾಂತರಿಸುವ ಸಮಯದಲ್ಲಿ ಪ್ರತಿಮೆಗೆ ಯಾವುದೇ ರೀತಿಯಲ್ಲೂ ಹಾನಿಯಾಗದಂತೆ ನಿಗಾ ವಹಿಸಬೇಕು' ಎಂದು ಸರ್ಕಾರಕ್ಕೆ ತಾಕೀತು ಮಾಡಿದೆ.

ವಿಧಾನಸೌಧ ಮುಂಭಾಗದಲ್ಲಿದ್ದ   ನೆಹರೂ ಪ್ರತಿಮೆ ಹಾಗೂ ನೇತಾಜಿ  ಅವರ ಪ್ರತಿಮೆಯನ್ನು ಮೆಟ್ರೊ ಕಾಮಗಾರಿಗಾಗಿ ತಾತ್ಕಾಲಿಕವಾಗಿ ಸ್ಥಳಾಂತರ ಮಾಡಲಾಗಿದೆ. ಆದರೆ, ಕೆಲವು ಸಂಘಟನೆಗಳ ವಿರೋಧದ ಕಾರಣ, ಅಂಬೇಡ್ಕರ್ ಪ್ರತಿಮೆಯನ್ನು ಸರ್ಕಾರ ಸ್ಥಳಾಂತರ ಮಾಡುತ್ತಿಲ್ಲ. ಇದರಿಂದ ಮೆಟ್ರೊ ಕಾಮಗಾರಿಯ ವೆಚ್ಚ ಹೆಚ್ಚಾಗುತ್ತಿದೆ ಎಂದು ಅವರು ದೂರಿದ್ದರು.

`ಕೆಲವು ಸಂಘಟನೆಗಳು ಪ್ರತಿಮೆಯನ್ನು ತಾತ್ಕಾಲಿಕವಾಗಿ ಸ್ಥಳಾಂತರ ಮಾಡುವುದನ್ನು ಭಾವನಾತ್ಮಕ ವಿಷಯವನ್ನಾಗಿ ನೋಡುತ್ತಿವೆ. ಇದು ಸರಿಯಲ್ಲ. ಹಾಗೆಯೇ, ಈ ಪ್ರತಿಮೆ ಇರುವ ಸ್ಥಳ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುವಂಥದ್ದೂ ಅಲ್ಲ. ಸ್ಥಳಾಂತರಕ್ಕೆ ಕಾನೂನು ತೊಡಕು ಇಲ್ಲ' ಎಂದು ವಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.