ಬೆಂಗಳೂರು: `ದಲಿತರು ಮತ್ತು ಹಿಂದೂಗಳು ಬೇರೆ ಬೇರೆ ಎಂದು ಹೇಳುವ ಮೂಲಕ ಅಂಬೇಡ್ಕರರ ಹೆಸರು ಹೇಳಿಕೊಂಡ ಕೆಲ ಸಂಸ್ಥೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಪಿತೂರಿ ನಡೆಸುತ್ತಿವೆ~ ಎಂದು ಆರ್ಎಸ್ಎಸ್ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ನುಡಿದರು.
ರಾಷ್ಟ್ರೋತ್ಥಾನ ಸಾಹಿತ್ಯವು ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಚಂದ್ರಶೇಖರ ಭಂಡಾರಿ ಅವರು ಅನುವಾದಿಸಿದ (ಮರಾಠಿ ಮೂಲ ದತ್ತೋಪಂತ ಠೇಂಗಡಿ) `ಸಾಮಾಜಿಕ ಕ್ರಾಂತಿಸೂರ್ಯ ಡಾ.ಬಾಬಾಸಾಹೇಬ್ ಅಂಬೇಡ್ಕರ್~ ಕೃತಿ ಕುರಿತು ಮಾತನಾಡಿದ ಅವರು, `ಆದರೆ ದಲಿತರೂ ಹಿಂದೂ ಧರ್ಮಕ್ಕೆ ಸೇರಿದವರೇ. ಸ್ವತಃ ಅಂಬೇಡ್ಕರರೇ ಹಿಂದೂ ರಾಷ್ಟ್ರ ರಚನೆಯ ಬಗ್ಗೆ ಮಾತನಾಡಿದ್ದಾರೆ. ಸಂಸ್ಕೃತ ರಾಷ್ಟ್ರಭಾಷೆ ಆಗಬೇಕು. ಭಗವಾಧ್ವಜ ರಾಷ್ಟ್ರಧ್ವಜ ಆಗಬೇಕು ಎಂಬ ಬಗ್ಗೆ ಜನಮತಗಣನೆಯನ್ನೂ ನಡೆಸಿದ್ದರು~ ಎಂದರು.
`ರಾಜಕೀಯ ಅವರ ಮೂಲಪ್ರವೃತ್ತಿ ಆಗಿರಲಿಲ್ಲ. ಆದರೆ ದಲಿತರಿಗೆ ನ್ಯಾಯವಾಗಿ ಸಿಗಬೇಕಿದ್ದ ಸ್ಥಾನಮಾನ ಸಿಗದಿದ್ದರಿಂದ ರಾಜಕೀಯ ಪ್ರವೇಶದ ನಿರ್ಧಾರ ಕೈಗೊಂಡರು. ಏಕೆಂದರೆ ಇಲ್ಲಿನ ಚಾತುರ್ವರ್ಣ ಪದ್ಧತಿಯ ಆಳವಾದ ಅರಿವು ಅವರಿಗಿತ್ತು. ವರ್ಣಗಳನ್ನು ಮೆಟ್ಟಿಲುಗಳಿಲ್ಲದ ಮಹಡಿಗಳಿಗೆ ಹೋಲಿಸಿದ್ದ ಅವರು, ಬ್ರಾಹ್ಮಣನಾಗಿ ಹುಟ್ಟಿದ ವ್ಯಕ್ತಿ ಕೆಳಗಿನ ಮಹಡಿಗೂ ಬರದೇ, ಮೇಲಿನ ಮಹಡಿಗೂ ಹೋಗದೇ ಸಾಯುವ ಪರಿಸ್ಥಿತಿಯನ್ನು ಅವರು ಅರಿತಿದ್ದರು. ಆದ್ದರಿಂದಲೇ ಬೌದ್ಧ ಧರ್ಮ ಸೇರುವ ನಿರ್ಧಾರವನ್ನು ಅವರು ಕೈಗೊಂಡರು~ ಎಂದು ನುಡಿದರು.
ರಾಷ್ಟ್ರೋತ್ಥಾನ ಪರಿಷತ್ತಿನ ಮುಖ್ಯಸ್ಥ ಎಸ್.ಆರ್.ರಾಮಸ್ವಾಮಿ ಸ್ವಾಗತಿಸಿದರು. ಕೃತಿ ಅನುವಾದಕ ಚಂದ್ರಶೇಖರ ಭಂಡಾರಿ ವೇದಿಕೆಯಲ್ಲಿದ್ದರು.
ರಾಜ್ಯಸಭೆ ಸದಸ್ಯ ಎಂ.ರಾಮಾ ಜೋಯಿಸ್, ಆರ್ಎಸ್ಎಸ್ ಮುಖಂಡ ಮೈ.ಚ.ಜಯದೇವ, ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಪ್ರೇಕ್ಷಕರ ಸಾಲಿನಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.