ಬೆಂಗಳೂರು: ಹನುಮಂತನಗರದ ಅರ್ಕಾವತಿ ರಸ್ತೆಯಲ್ಲಿರುವ ಆಟಿಕೆಗಳ ತಯಾರಿಕಾ ಘಟಕದಲ್ಲಿ ಸ್ಟೌ ಸ್ಫೋಟದಿಂದ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮಹಿಳಾ ಕಾರ್ಮಿಕರೊಬ್ಬರು ಸಾವನ್ನಪ್ಪಿರುವ ಘಟನೆ ಮಂಗಳವಾರ ನಡೆದಿದೆ.
ಬೃಂದಾವನನಗರದ ಧನಲಕ್ಷ್ಮಿ (38) ಸಾವನ್ನಪ್ಪಿದ ಕಾರ್ಮಿಕ ಮಹಿಳೆ. ಆಟಿಕೆಗಳ ತಯಾರಿಕಾ ಘಟಕದಲ್ಲಿ ಮಧ್ಯಾಹ್ನ 3.30ರ ಸುಮಾರಿಗೆ ಸ್ಟೌನಲ್ಲಿ ಸೀಮೆಎಣ್ಣೆ ಸೋರಿಕೆಯಾಗಿದ್ದರಿಂದ ಸ್ಟೌ ಸ್ಫೋಟಗೊಂಡಿದೆ. ಧನಲಕ್ಷಿ ಅವರು ಬೆಂಕಿಗೆ ಸಿಲುಕಿ ತೀವ್ರ ಗಾಯಗೊಂಡರು. ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗ ಮಧ್ಯೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. `ಕಟ್ಟಡದಲ್ಲಿ ಪೇಪರ್ ಬಂಡಲ್ಗಳಿದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಿತ್ತು. ಕಟ್ಟಡದ ಮಾಲೀಕ ನಾಗಪ್ಪ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ~ ಎಂದು ಹನುಮಂತನಗರ ಪೊಲೀಸರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.