ADVERTISEMENT

ಅಡ್ಡಾದಿಡ್ಡಿ ಸಂಚರಿಸಿದ ಟ್ರಕ್‌ ವಾಹನ, ಕಟ್ಟಡಗಳು ಜಖಂ

ಟಿ.ದಾಸರಹಳ್ಳಿಯ ರವೀಂದ್ರ ನಗರದಲ್ಲಿ ಘಟನೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 20:16 IST
Last Updated 26 ಅಕ್ಟೋಬರ್ 2017, 20:16 IST
ಅಡ್ಡಾದಿಡ್ಡಿ ಸಂಚರಿಸಿದ ಟ್ರಕ್‌ ವಾಹನ, ಕಟ್ಟಡಗಳು ಜಖಂ
ಅಡ್ಡಾದಿಡ್ಡಿ ಸಂಚರಿಸಿದ ಟ್ರಕ್‌ ವಾಹನ, ಕಟ್ಟಡಗಳು ಜಖಂ   

ಬೆಂಗಳೂರು: ಟಿ.ದಾಸರಹಳ್ಳಿ ಬಳಿಯ ರವೀಂದ್ರ ನಗರದಲ್ಲಿ ಗುರುವಾರ ರಾತ್ರಿ ಟ್ರಕ್‌ ಅಡ್ಡಾದಿಡ್ಡಿಯಾಗಿ ಸಂಚರಿಸಿ ಕಟ್ಟಡಗಳಿಗೆ ನುಗ್ಗಿ  ಆಟೊ ಹಾಗೂ ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು, ಮಗು ಸೇರಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಗೊಂಡವರ ಹೆಸರು ಗೊತ್ತಾಗಿಲ್ಲ. ಟ್ರಕ್‌ನ ಬ್ರೇಕ್‌ ಫೇಲ್‌ ಆಗಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಘಟನೆ ಬಳಿಕ  ಪರಾರಿಯಾಗಲು ಯತ್ನಿಸಿದ್ದ ಟ್ರಕ್ ಚಾಲಕನನ್ನು ಸ್ಥಳೀಯರೇ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

‘ರಸ್ತೆ ಕಾಮಗಾರಿಗಾಗಿ ಡಾಂಬರ್‌ ಸಾಗಿಸುತ್ತಿದ್ದ ಟ್ರಕ್‌, ರಾತ್ರಿ 9 ಗಂಟೆಯ ಸುಮಾರಿಗೆ ರವೀಂದ್ರ ನಗರಕ್ಕೆ ಬಂದಿತ್ತು. ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಏಕಾಏಕಿ ಕಟ್ಟಡವೊಂದಕ್ಕೆ ನುಗ್ಗಿದ್ದ ಟ್ರಕ್‌, ಅದಾದ ಬಳಿಕ ಫುಟ್‌ಪಾತ್‌ನಲ್ಲಿ ಸಂಚರಿಸಿ ಆಟೊಗೆ ಗುದ್ದಿದೆ. ತದನಂತರ ಮತ್ತೊಂದು ಕಟ್ಟಡಕ್ಕೆ ನುಗ್ಗಿ, ಅಲ್ಲಿಂದ ಪುನಃ ರಸ್ತೆಗೆ ಬಂದು ಆಟೊ ಹಾಗೂ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. ಬಳಿಕ ಟ್ರಕ್‌ ಸಹ ರಸ್ತೆಯಲ್ಲೇ ಉರುಳಿಬಿದ್ದಿತು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಆಟೊದಲ್ಲಿದ್ದ ಎರಡು ವರ್ಷದ ಮಗು ಹಾಗೂ ವೃದ್ಧರೊಬ್ಬರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದುಬಿದ್ದಿದ್ದರು. ಸ್ಥಳೀಯರು ಅವರನ್ನು ಆಸ್ಪತ್ರೆಗ ಕರೆದೊಯ್ದರು. ಉರುಳಿಬಿದ್ದ ಟ್ರಕ್‌ನ ಡಾಂಬರ್‌ನಲ್ಲಿ ಸಿಲುಕಿದ್ದ ಇಬ್ಬರನ್ನು ಸ್ಥಳೀಯರೇ ರಕ್ಷಿಸಿದ್ದಾರೆ’ ಎಂದು ಹೇಳಿದರು.

ಆರೋಪಿ ವಶಕ್ಕೆ:

‘ಘಟನೆಯಲ್ಲಿ ಎರಡು ಕಟ್ಟಡದ ಪಾರ್ಶ್ವ ಭಾಗವು ಕುಸಿದುಬಿದ್ದಿದೆ. ಅದರ ಮಾಲೀಕರು ದೂರು ನೀಡಿದ್ದಾರೆ. ಅದರನ್ವಯ ಚಾಲಕನನ್ನು ವಶಕ್ಕೆ ಪಡೆದು, ಟ್ರಕ್‌ ಜಪ್ತಿ ಮಾಡಿದ್ದೇವೆ’ ಎಂದು ಪೀಣ್ಯ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.

‘ಟಿ.ದಾಸರಹಳ್ಳಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅದಕ್ಕೆ ಡಾಂಬರ್‌ ಪೂರೈಕೆ ಮಾಡುತ್ತಿದ್ದ ಟ್ರಕ್‌ ಇದಾಗಿತ್ತು. ಆ ಬಗ್ಗೆ ಮತ್ತಷ್ಟು ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.