ADVERTISEMENT

ಅಣ್ಣೇಶ್ವರ ಗ್ರಾಮ : ವಿದೇಶಿ ಅಧಿಕಾರಿಗಳ ತಂಡದ ಭೇಟಿ

​ಪ್ರಜಾವಾಣಿ ವಾರ್ತೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST
ಅಣ್ಣೇಶ್ವರ ಗ್ರಾಮ : ವಿದೇಶಿ ಅಧಿಕಾರಿಗಳ ತಂಡದ ಭೇಟಿ
ಅಣ್ಣೇಶ್ವರ ಗ್ರಾಮ : ವಿದೇಶಿ ಅಧಿಕಾರಿಗಳ ತಂಡದ ಭೇಟಿ   

ದೇವನಹಳ್ಳಿ: ತಾಲ್ಲೂಕಿನ ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಹದಿನಾಲ್ಕು ಜನ ಸದಸ್ಯರ ವಿದೇಶಿ ಅಧಿಕಾರಿಗಳ ತಂಡವು ಭೇಟಿ ನೀಡಿ ಕುಡಿಯುವ ನೀರಿನ ಹಾಗೂ ಶೌಚಾಲಯಗಳ ಸಮರ್ಪಕ ಬಳಕೆ ಕುರಿತು ಮಾಹಿತಿ ಪಡೆಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗೋಪಾಲಯ್ಯ, ಗ್ರಾಮ ಪಂಚಾಯಿತಿ ವ್ಯವಸ್ಥೆ ಹಾಗೂ ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಯೋಜನೆಗಳನ್ನು ಕುರಿತು ಕಿರು ಚಿತ್ರದ ಮೂಲಕ ಸಮಗ್ರವಾಗಿ ವಿವರಿಸಿದರು.

ಪ್ರತಿ ಕುಟುಂಬಕ್ಕೆ ಶೌಚಾಲಯ ಪ್ರತಿ ಗ್ರಾಮಗಳಲ್ಲಿ ಪ್ರಮುಖ ಸ್ಥಳದಲ್ಲಿ ಕಸಗಳ ತೊಟ್ಟಿ ಹಾಗೂ ಘನ ಕಸಗಳ ಶೇಖರಣಾ ತೊಟ್ಟಿ ಅಳವಡಿಸಿರುವುದು, ಮನೆಗಳಲ್ಲಿ ದಿನ ಬಳಕೆಯಿಂದ ಹೊರಹಾಕುವ ಕಸದ ಎರಡು ಬುಟ್ಟಿಗಳನ್ನು ಪ್ರತ್ಯೇಕಿಸಿ ಒಂದಕ್ಕೆ ಕೆಂಪು ಮತ್ತೊಂದಕ್ಕೆ ಹಸಿರು ಬಣ್ಣ ನೀಡಿರುವುದು, ಪ್ಲಾಸ್ಟಿಕ್ ರಹಿತ ಪಂಚಾಯಿತಿಯನ್ನಾಗಿಸಲು ಪ್ರತಿ ಕುಟುಂಬಕ್ಕೆ ದಿನ ಬಳಕೆ ವಸ್ತು ಖರೀದಿಸಿ ತರಲು ಹತ್ತಿ ಬಟ್ಟೆಯ ಕೈಚೀಲಗಳನ್ನು ಮೂರು ವರ್ಗದಲ್ಲಿ ನೀಡಿರುವ ಸಂಗತಿಗಳನ್ನು ವಿವರಿಸಿದರು.


`ಗಾ. ಪಂ. ವ್ಯಾಪ್ತಿಯಲ್ಲಿನ ಎಲ್ಲಾ ಸರ್ಕಾರಿ ಶಾಲೆಗಳಿಗೆ ಸೋಲಾರ್ ದೀಪ ಅಳವಡಿಸಿ ವಿದ್ಯುತ್ ಬಳಕೆ ಪ್ರಮಾಣ ಕಡಿಮೆ ಮಾಡಲಾಗಿದೆ. ಗ್ರಾಮಗಳ ಸ್ವಚ್ಛತೆ ಕಾಯ್ದುಕೊಳ್ಳಲು ಕಸ ತ್ಯಾಜ್ಯ ವಿಲೇವಾರಿಗೆ ಗುತ್ತಿಗೆ ನೀಡಲಾಗಿದೆ.

ವಿಲೇವಾರಿ ತ್ಯಾಜ್ಯಗಳನ್ನು ಶೇಖರಣಾ ಘಟದಲ್ಲಿ ಪ್ರತ್ಯೇಕಿಸಿ ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಪಂಚಾಯಿತಿಗೆ ಬಳಸಿಕೊಳ್ಳಲಾಗುತ್ತಿದೆ. ಸಾಕ್ಷರತೆ, ಸ್ತ್ರಿ ಶಕ್ತಿ ಗುಂಪುಗಳ ರಚನೆ, ಅಂಗನವಾಡಿ ಕೇಂದ್ರಗಳ ನಿರ್ವಹಣೆ, ಪರಿಸರ ಜಾಗೃತಿ ಮಾರಕ ರೋಗಗಳ ಬಗ್ಗೆ ಸಭೆ, ಕೃಷಿ ಮತ್ತು ಪಶುಪಾಲನೆ ಬಗ್ಗೆ ಅರಿವು ನೀಡಲಾಗುತ್ತಿದೆ~ ಎಂದರು.

ಕೇಂದ್ರ ಗ್ರಾಮೀಣಾಭಿವೃದ್ಧಿ ಸಮನ್ವಯಾಧಿಕಾರಿ ಡಾ.ಪಿ.ಶಿವರಾಮ್ ಮಾತನಾಡಿದರು. ಜಿ. ಪಂ. ಉಪ ಕಾರ್ಯದರ್ಶಿ ಡಿ.ಎಸ್.ಮುನಿರಾಜು, ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಪಿಳ್ಳಪ್ಪ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT