ADVERTISEMENT

`ಅತೃಪ್ತಿ' ಹಿನ್ನೆಲೆಯ ಪಕ್ಷಗಳಿಗೆ ಭವಿಷ್ಯ ಇಲ್ಲ

ಸಾಹಿತಿ ನಲ್ಲೂರು ಪ್ರಸಾದ್ ಅಭಿಮತ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2013, 20:03 IST
Last Updated 7 ಏಪ್ರಿಲ್ 2013, 20:03 IST

ಬೆಂಗಳೂರು: `ಅತೃಪ್ತಿಯಿಂದ ಸ್ಥಾಪನೆ ಆಗುವ ಪ್ರಾದೇಶಿಕ ಪಕ್ಷಗಳು ಹೆಚ್ಚು ದಿನ ಅಸ್ತಿತ್ವದಲ್ಲಿರುವುದಿಲ್ಲ' ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ನಲ್ಲೂರು ಪ್ರಸಾದ್ ಅಭಿಪ್ರಾಯಪಟ್ಟರು.

ಬನವಾಸಿ ಬಳಗ ಪ್ರಕಾಶನವು ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ಬನವಾಸಿ ಬಳಗದ ಅಧ್ಯಕ್ಷ ಜಿ.ಆನಂದ್ ಅವರ`ರಾಷ್ಟ್ರೀಯ ಪಕ್ಷಗಳ ಆಳ್ವಿಕೆ: ಸ್ವತಂತ್ರ ಭಾರತದಲ್ಲಿ ಅತಂತ್ರ ಕರ್ನಾಟಕ' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ಚಳವಳಿ ಮೂಲಕ, ನಾಡಿನ ಅಭಿವೃದ್ಧಿಯ ಆಶಯದೊಂದಿಗೆ ಪ್ರಾದೇಶಿಕ ಪಕ್ಷಗಳು ರಚನೆಯಾಗಬೇಕು. ಎಂಬತ್ತರ ದಶಕದಲ್ಲಿ ರೈತ ಚಳವಳಿಯ ಮೂಲಕ ಅಂತಹ ಒಂದು ಪ್ರಬಲ ಪ್ರಾದೇಶಿಕ ಪಕ್ಷದ ರಚನೆಯ ಸಾಧ್ಯತೆ ಇತ್ತು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಅಂತಹ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ' ಎಂದರು.

ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, `ರಾಜ್ಯದ ಹಿತರಕ್ಷಣೆಗೆ ಹೋರಾಟ ನಡೆಸಿದರೆ ಅದು ದೇಶಕ್ಕೆ ತೋರುವ ಅಗೌರವವಲ್ಲ. ಭಾಷೆ, ನೆಲ, ಜಲ, ಗಡಿ ಉಳಿವಿಗೆ ನಡೆಯುವ ಹೋರಾಟಗಳಿಗೆ ಸ್ಪಂದಿಸುವ ಪಕ್ಷಗಳ ಅಗತ್ಯವಿದೆ' ಎಂದರು. ಹಿರಿಯ ಪತ್ರಕರ್ತ ರವೀಂದ್ರ ರೇಷ್ಮೆ, ಪತ್ರಕರ್ತ ರವಿ ಹೆಗ್ಡೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.