ಕೃಷ್ಣರಾಜಪುರ: ದೊಡ್ಡ ಬಾಣಸವಾಡಿ ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಕೋದಂಡ ರಾಮಸ್ವಾಮಿ ಬ್ರಹ್ಮರಥೋತ್ಸವ ಮತ್ತು ಆಂಜನೇಯಸ್ವಾಮಿ ಉತ್ಸವ ಸಹಸ್ರಾರು ಭಕ್ತರ ಸಮ್ಮಿಖದಲ್ಲಿ ಭಾನುವಾರ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ 6 ಗಂಟೆಗೆ ದೇವರಿಗೆ ಅಭಿಷೇಕ ಮತ್ತು ಹೂವಿನ ಅಲಂಕಾರ, ಬೆಳ್ಳಿ ಕವಚ ಅಲಂಕಾರ, ಪಾನಕ ಪೂಜೆ ಸೇವೆಗಳು ನಡೆದವು. ಇದೇ ಸಂದರ್ಭದಲ್ಲಿ ಬಡಾವಣೆಯ ನಾಗರಿಕರು ಭಕ್ತರಿಗೆ ಪಾನಕ, ಕೋಸಂಬರಿ ಮತ್ತು ಮಜ್ಜಿಗೆ ವಿತರಿಸಿದರು. ಅಲ್ಲದೆ ದಾನಿಗಳು ಆಗಮಿಸಿದ ಭಕ್ತರಿಗೆ ಊಟದ ಏರ್ಪಾಡನ್ನೂ ಮಾಡಿದ್ದರು. ದೇವಸ್ಥಾನದ ವತಿಯಿಂದಲೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಪಾಲಿಕೆ ಸದಸ್ಯ ಕೋದಂಡರೆಡ್ಡಿ, ಸ್ಥಳೀಯ ಮುಖಂಡರಾದ ಬಾಬುರೆಡ್ಡಿ, ಚಂದ್ರರೆಡ್ಡಿ, ಬಿ.ಎಸ್.ಗಣೇಶರೆಡ್ಡಿ, ಪಿ.ಚಂದ್ರಶೇಖರರೆಡ್ಡಿ ಮತ್ತು ತಾಯಪ್ಪರೆಡ್ಡಿ ಸೇರಿದಂತೆ ರಾಮ ಮೂರ್ತಿನಗರ, ಕಲ್ಕೆರೆ, ಚಿಕ್ಕಬಾಣಸವಾಡಿ, ಕಲ್ಯಾಣ ನಗರ, ಬಿ.ಚನ್ನಸಂದ್ರ ಸೇರಿದಂತೆ ಸುತ್ತಮತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.