ADVERTISEMENT

ಅನಿಲ ಪೂರೈಕೆ: ಆತಂಕ ಪಡುವ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:40 IST
Last Updated 12 ಫೆಬ್ರುವರಿ 2012, 19:40 IST

ಬೆಂಗಳೂರು: ಅಡುಗೆ ಅನಿಲದ ಸಾಗಾಣಿಕೆಗೆ ನೀಡುವ ಬಾಡಿಗೆ ದರವನ್ನು ಹೆಚ್ಚಿಸಬೇಕು ಎಂದು ಲಾರಿ ಮಾಲೀಕರು ಜನವರಿಯಲ್ಲಿ ಮಾಡಿದ್ದ ಮುಷ್ಕರದ ಪರಿಣಾಮ ಗ್ರಾಹಕರು ಹಾಗೂ ವಿತರಕರ ಮೇಲೆ ಬೀರುತ್ತಿದೆ.

ಗ್ರಾಹಕರು ಹೆಸರು ನೊಂದಾಯಿಸಿ 15 ದಿನಗಳಾದರೂ ಅಡುಗೆ ಅನಿಲದ ಪೂರೈಕೆಯಾಗುತ್ತಿಲ್ಲ. ಇದರಿಂದ ಅಡುಗೆ ಅನಿಲದ ವಿತರಕರು ಗ್ರಾಹಕರ ಆಕ್ರೋಶಕ್ಕೆ ತುತ್ತಾಗಬೇಕಾದ ಪರಿಸ್ಥತಿ ನಿರ್ಮಾಣವಾಗಿದೆ.

ಅಡುಗೆ ಅನಿಲದ ವಿತರಕರೊಬ್ಬರು ಮಾತನಾಡಿ `ಈ ಹಿಂದೆ ಆರು ಸಾವಿರ ಸಿಲಿಂಡರ್‌ಗಳ ಪೂರೈಕೆ ಕೊರತೆ ಇತ್ತು. ಆದರೆ ಈಗ ಅದರ ಸಂಖ್ಯೆ 17 ಸಾವಿರಕ್ಕೆ ಹೆಚ್ಚಿದೆ. ಪ್ರತಿನಿತ್ಯ 1.200 ಜನ ಅಡುಗೆ ಅನಿಲಕ್ಕೆ ಹೆಸರು ನೊಂದಾಯಿಸುತ್ತಿದ್ದಾರೆ ಆದರೆ ಅದರ ಅರ್ಧದಷ್ಟನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ~ ಎಂದರು.

ಆತಂಕ ಪಡುವ ಅಗತ್ಯವಿಲ್ಲ: ಭಾರತದ ಎಲ್‌ಪಿಜಿ ವಿತರಕರ ಒಕ್ಕೂಟದ ಕಾರ್ಯದರ್ಶಿ ಎನ್. ಸತ್ಯನ್ ಮಾತನಾಡಿ ` ನಮಗೆ ಅಡುಗೆ ಅನಿಲದ ಪೂರೈಕೆಯಾಗುತ್ತಿಲ್ಲ. ಆದ್ದರಿಂದ ಸೂಕ್ತ ಸಮಯದಲ್ಲಿ ಸರಬರಾಜು ಸಾಧ್ಯವಾಗುತ್ತಿಲ್ಲ. ಗ್ರಾಹಕರು ಪ್ರತಿನಿತ್ಯ ವಿತರಕರ ಬಳಿ ಹೋಗಿ ಜಗಳ ಮಾಡುತ್ತಿದ್ದಾರೆ. ಭಾರತೀಯ ತೈಲ ಕಂಪೆನಿ (ಐಒಸಿಎಲ್)ಯ ಅಧಿಕಾರಿಗಳನ್ನು ಭೇಟಿ ಮಾಡಿ ಗ್ರಾಹಕರ ಹಾಗೂ ವಿತರಕರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಅಡುಗೆ ಅನಿಲದ ಸಮರ್ಪಕ ಪೂರೈಕೆಯಾಗಲಿದೆ ಎಂದರು.

ಹದಿನೈದು ದಿನದೊಳಗೆ ಸಮಸ್ಯೆಗೆ ಪರಿಹಾರ ದೊರೆಯುವ ವಿಶ್ವಾಸವಿದೆ. ಆದ್ದರಿಂದ ಗ್ರಾಹಕರು ಹಾಗೂ ವಿತರಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸತ್ಯನ್ ತಿಳಿಸಿದರು. ಪೂರೈಕೆಗೆ ಸ್ವಲ್ಪ ವಿಳಂಬವಾದರೆ ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಐಒಸಿಎಲ್‌ನ ಕಾರ್ಯ ನಿರ್ವಾಹಕ ವ್ಯವಸ್ಥಾಪಕ ಬಿ.ಅಶೋಕ್ ಮಾತನಾಡಿ `ಅಡುಗೆ ಅನಿಲದ ಸಾಗಾಣಿಕೆಯ ಬಾಡಿಗೆ ದರವನ್ನು ಹೆಚ್ಚಿಸಬೇಕು ಎಂದು ಜನವರಿ ಎರಡನೇ ವಾರದಲ್ಲಿ ಎಲ್‌ಪಿಜಿ ಲಾರಿ ಮಾಲೀಕರು ಮಾಡಿದ ಧರಣಿಯಿಂದ ಅನಿಲ ಪೂರೈಕೆ ವಿಳಂಬವಾಗುತ್ತಿದೆ. ಹದಿನೈದು ದಿನದೊಳಗೆ ಅಡುಗೆ ಅನಿಲದ ಪೂರೈಕೆ ಮೊದಲಿನಂತೆ ಸಹಜ ಸ್ಥಿತಿಗೆ ಬರಲಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.