ADVERTISEMENT

ಅನುವಾದದಿಂದ ಸಾಹಿತ್ಯದ ಗಡಿ ವಿಸ್ತರಣೆ

ಹಿರಿಯ ಸಾಹಿತಿ ಪ್ರೊ. ಹಂಪ ನಾಗರಾಜಯ್ಯ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 20:11 IST
Last Updated 6 ಜನವರಿ 2014, 20:11 IST

ಬೆಂಗಳೂರು: ‘ಅನುವಾದದಿಂದಾಗಿ ಜಗತ್ತಿನ ಎಲ್ಲ ಭಾಷೆ­ಗಳ ಸಾಹಿತ್ಯದ ಗಡಿ ವಿಸ್ತಾರವಾಗಿದೆ’ ಎಂದು ಹಿರಿಯ ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯವು ನಗರದಲ್ಲಿ ಸೋಮವಾರ  ಆಯೋಜಸಿದ್ದ ಕಾರ್ಯಕ್ರಮದಲ್ಲಿ ‘ಪ್ರೊ.ಎಂ.ಹಿರಿಯಣ್ಣ ಗ್ರಂಥ ಪುರಸ್ಕಾರ’ ಪ್ರದಾನ ಮಾಡಿ ಅವರು ಮಾತನಾಡಿದರು.

‘ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಪರಸ್ಪರ ಶತ್ರು­ಗಳಲ್ಲ. ನಮ್ಮ ಅರಿವಿನ ಪರಿದಿಯನ್ನು ವಿಸ್ತರಿಸಿಕೊಳ್ಳಲು ಎರಡೂ ಭಾಷೆಗಳು ಒಟ್ಟಿಗೆ ಸಾಗಬೇಕಾದ ಅಗತ್ಯ­ವಿದೆ. ನಮ್ಮ ಹಲವು ಹಿರಿಯ ವಿದ್ವಾಂಸರು ಸಂಸ್ಕೃತ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಸ್ಕೃತ ಮತ್ತು ಪ್ರಾಕೃತ ಸಾಹಿತ್ಯದ ಅನುವಾದದಿಂದ ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿದೆ’ ಎಂದರು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ‘ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾಂಸರು ಉತ್ತಮ ಕೃತಿಗಳನ್ನು ಅನುವಾದಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಗ್ರಂಥಗಳು ಕನ್ನಡ
ಮತ್ತು ಸಂಸ್ಕೃತಕ್ಕೆ ಅನುವಾದವಾಗಬೇಕು’ ಎಂದು ಹೇಳಿದರು.

ಡಾ.ಗಣೇಶ್‌ ಈಶ್ವರಭಟ್ಟ (ಜಗದ್ಗುರುವಿಜಯಂ–ಕಾವ್ಯ ಸಾಹಿತ್ಯ), ವಿದ್ವಾನ್‌ ಎಚ್‌.ಎಂ.ಸುಧೀರ (ರಕ್ತ­ರಾಂಕವ–ಕಥಾ ಸಾಹಿತ್ಯ), ಡಾ.ವಿ.ಶ್ರೀನಿಧಿ (ಗೀತಾ­ಗೂಢಾರ್ಥಚಂದ್ರಿಕಾ–ಸಂಪಾದನ ಸಾಹಿತ್ಯ), ಡಾ.ಶಾಂತಲಾ (ಅಗಸ್ತ್ಯ –ಅನುವಾದ ಸಾಹಿತ್ಯ), ವಿದ್ವಾನ್‌ ಅಮೈ ಅನಂತಕೃಷ್ಣ ಭಟ್ಟ (ಪ್ರಾತಿಶಾಖ್ಯ­ಪ್ರಕಾಶ –ಅನುವಾದ ಸಾಹಿತ್ಯ) ಅವರಿಗೆ ‘ಪ್ರೊ.ಎಂ.ಹಿರಿಯಣ್ಣ ಗ್ರಂಥಪುರಸ್ಕಾರ’ ಪ್ರದಾನ ಮಾಡಲಾಯಿತು. ಪುರಸ್ಕಾರವು ₨ 10 ಸಾವಿರ ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.