ADVERTISEMENT

ಅಪಹೃತ ವೈದ್ಯರ ಬಿಡುಗಡೆ: ಪೊಲೀಸರಿಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಬೆಂಗಳೂರು: `ಅಪಹರಣಗೊಂಡಿದ್ದ ಸಹೋದರ ಡಾ.ಶಂಕರ್ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿದ ಕೆ.ಆರ್.ಪುರ ಪೊಲೀಸರು ಸಹೋದರನಿಗೆ ಪುನರ್ಜನ್ಮ ನೀಡಿದ್ದಾರೆ~ ಎಂದು ವೈದ್ಯ ಶಂಕರ್ ಅವರ ಸಹೋದರ ಸುರೇಶ್ ಅವರು ಪೊಲೀಸರ ಕಾರ್ಯ ವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

`ದೂರು ನೀಡುತ್ತಿದ್ದಂತೆ ಕಾರ್ಯ ಪ್ರವೃತ್ತರಾದ ಇನ್‌ಸ್ಪೆಕ್ಟರ್ ವಿ.ಕೆ.ವಾಸುದೇವ ಮತ್ತು ಸಿಬ್ಬಂದಿಯ ಕರ್ತವ್ಯ ಪ್ರಜ್ಞೆಯನ್ನು ಎಂದಿಗೂ ಮರೆಯುವುದಿಲ್ಲ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

`ಆರೋಪಿ ಇರ್ಷಾದ್ ಮತ್ತು ಸಹಚರರು ಶನಿವಾರ (ಫೆ.11) ಸಂಜೆ ನನ್ನ ಮೊಬೈಲ್‌ಗೆ ಕರೆ ಮಾಡಿ ಸಹೋದರನನ್ನು ಅಪಹರಿಸಿರುವ ವಿಷಯ ತಿಳಿಸುತ್ತಿದ್ದಂತೆ ಸಾಕಷ್ಟು ಆತಂಕಗೊಂಡೆ. 50 ಲಕ್ಷ ರೂಪಾಯಿ ಹಣ ಕೊಡದಿದ್ದರೆ ಸಹೋದರನನ್ನು ಕೊಲೆ ಮಾಡುವುದಾಗಿಯೂ ಅಪಹರಣಕಾರರು ಬೆದರಿಕೆ ಹಾಕಿದ್ದರಿಂದ ಕುಟುಂಬ ಸದಸ್ಯರಿಗೆ ದಿಕ್ಕು ತೋಚದಂತಾಯಿತು. ಅಲ್ಲದೇ ಅಷ್ಟು ದೊಡ್ಡ ಮೊತ್ತದ ಹಣವನ್ನು ಹೊಂದಿಸುವುದು ಸಹ ಸಾಧ್ಯವಿರಲಿಲ್ಲ. ಬೇರೆ ದಾರಿಯಿಲ್ಲದೆ ಕೆ.ಆರ್.ಪುರ ಠಾಣೆಗೆ ತೆರಳಿ ದೂರು ನೀಡಿದೆ. ಮುಂದೆ ಎಲ್ಲವೂ ಸಿನಿಮೀಯ ರೀತಿಯಲ್ಲಿ ನಡೆದು ಹೋಯಿತು~ ಎಂದರು.

ಇರ್ಷಾದ್‌ನ ತಂದೆಗೆ ಚಿಕಿತ್ಸೆ ನೀಡಲು ಫೆ.11ರಂದು ದೆಹಲಿಗೆ ಹೋಗಿದ್ದ ಶಂಕರ್ ಅವರನ್ನು ಆರೋಪಿಗಳು ಅಪಹರಿಸಿ ಹರಿಯಾಣದ ಹೊಡಾಲ್ ಗ್ರಾಮದ ಬಳಿಯ ಅರಣ್ಯ ಪ್ರದೇಶಕ್ಕೆ ಎಳೆದುಕೊಂಡು ಹೋಗಿದ್ದರು.
ಅಪಹರಣಕಾರರ ಮೊಬೈಲ್ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ ಕೆ. ಆರ್. ಪುರ ಪೊಲೀಸರುಹೊಡಾಲ್ ಠಾಣೆಯ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು.

ಆರೋಪಿಗಳಿಂದ ರಕ್ಷಿಸಲಾದ ವೈದ್ಯ ಶಂಕರ್ ಅವರನ್ನು ಮಂಗಳವಾರ ನಸುಕಿನಲ್ಲಿ ನಗರಕ್ಕೆ ಕರೆತರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.