ADVERTISEMENT

ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2012, 19:59 IST
Last Updated 26 ಡಿಸೆಂಬರ್ 2012, 19:59 IST

ಬೆಂಗಳೂರು: ನಗರದ ಭೂಪಸಂದ್ರದಲ್ಲಿ ಮಂಗಳವಾರ ರಾತ್ರಿ ಪಾನಮತ್ತ ವ್ಯಕ್ತಿಯೊಬ್ಬರು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸುದ್ದಗುಂಟೆಪಾಳ್ಯದಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಮಹಿಳೆ ನೇಣು ಹಾಕಿಕೊಂಡಿದ್ದಾರೆ.ಪಾನಮತ್ತ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿದ ಕಾರಣಕ್ಕೆ ಮನನೊಂದು ಅಪಾರ್ಟ್‌ಮೆಂಟ್‌ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೂಪಸಂದ್ರದಲ್ಲಿ ನಡೆದಿದೆ.

ಕಲ್ಪನಾ ಚಾವ್ಲಾ ರಸ್ತೆಯಲ್ಲಿನ ಜೆ.ವಿ.ಆರ್ಕೆಡ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ಉತ್ತರಪ್ರದೇಶ ಮೂಲದ ಅಂಕೂರ್ ಅಗರ್‌ವಾಲ್ (35) ಆತ್ಮಹತ್ಯೆ ಮಾಡಿಕೊಂಡವರು.ಅವರ ಮದುವೆಯಾಗಿ ಎರಡು ವರ್ಷವಾಗಿತ್ತು. ಪತ್ನಿ ಕೋಮಲ್ ಅಗರ್‌ವಾಲ್ ಮತ್ತು ಎಂಟು ತಿಂಗಳ ಗಂಡು ಮಗುವಿನ ಜತೆ ಅಪಾರ್ಟ್‌ಮೆಂಟ್‌ನ ಎರಡನೇ ಅಂತಸ್ತಿನ ಫ್ಲಾಟ್‌ನಲ್ಲಿ ವಾಸವಾಗಿದ್ದ ಅವರು, ಎಸ್.ಪಿ ರಸ್ತೆಯಲ್ಲಿನ `ಯುನೈಟೆಡ್ ಸೇಲ್ಸ್ ಎಂಟರ್‌ಪ್ರೈಸಸ್' ಹೆಸರಿನ ಕಬ್ಬಿಣ ಸಾಮಗ್ರಿಗಳ ಮಾರಾಟ ಮಳಿಗೆಯಲ್ಲಿ ಅಕೌಂಟೆಂಟ್ ಆಗಿದ್ದರು.

ಮದ್ಯವ್ಯಸನಿಯಾದ ಅಗರ್‌ವಾಲ್ ಅವರು ರಾತ್ರಿ ಪಾನಮತ್ತರಾಗಿ ತಡವಾಗಿ ಮನೆಗೆ ಬಂದಿದ್ದರು. ಈ ವಿಷಯವಾಗಿ ದಂಪತಿ ನಡುವೆ ವಾಗ್ವಾದ ನಡೆದು ಜಗಳವಾಗಿದೆ. ಈ ವೇಳೆ ಅವರು ಪತ್ನಿಗೆ ಹೊಡೆದಿದ್ದಾರೆ. ಇದರಿಂದ ಬೇಸರಗೊಂಡ ಕೋಮಲ್ ಅವರು ಊಟ ಮಾಡದೆ ಮಗುವಿನೊಂದಿಗೆ ಮಲಗಿದರು. ಪತ್ನಿಯೊಂದಿಗೆ ಜಗಳವಾಡಿದ್ದರಿಂದ ಮನನೊಂದ ಅಗರ್‌ವಾಲ್, ಫ್ಲಾಟ್‌ನ ಕಿಟಕಿ ಬಳಿಯ ಬಾಲ್ಕನಿಗೆ ಬಂದು ಕೆಳಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಮೈಕೊಲೇಔಟ್ ಬಳಿಯ ಸುದ್ದಗುಂಟೆಪಾಳ್ಯ ಏಳನೇ ಅಡ್ಡರಸ್ತೆ ನಿವಾಸಿ ಜಯಗೋಪಾಲ್ ಎಂಬುವರ ಪತ್ನಿ ಮೋನಿಕಾ (30) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮದುವೆಯಾಗಿ 13 ವರ್ಷಗಳಾಗಿದ್ದವು. ಖಾಸಗಿ ಆಸ್ಪತ್ರೆಯಲ್ಲಿ ಸ್ವಾಗತಕಾರರಾಗಿ ಕೆಲಸ ಮಾಡುತ್ತಿದ್ದ ಮೋನಿಕಾ ಅವರಿಗೆ ವರುಣ್ ಎಂಬ ಮಗನಿದ್ದಾನೆ.

ಜಯಗೋಪಾಲ್, ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಪತಿ ಮತ್ತು ಮಗ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಮೋನಿಕಾ ಅವರು ಪ್ರತ್ಯೇಕ ಕೋಣೆಗೆ ತೆರಳಿ ನೇಣು ಹಾಕಿಕೊಂಡಿದ್ದಾರೆ.ಬುಧವಾರ ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಮೈಕೊಲೇಔಟ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.