ADVERTISEMENT

ಆಡಳಿತ ಯಂತ್ರ ಮರೆತ ಬಿಜೆಪಿ: ಕಾಂಗ್ರೆಸ್ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 18:30 IST
Last Updated 12 ಜುಲೈ 2012, 18:30 IST

ಬೆಂಗಳೂರು: ರಾಜ್ಯದ ಜನರು ಬರಗಾಲ ಪರಿಸ್ಥಿತಿ ಎದುರಿಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಪಕ್ಷವು ಜಾತಿ ರಾಜಕಾರಣ ಮತ್ತು ಆಂತರಿಕ ಕಚ್ಚಾಟದ ಮೂಲಕ ಆಡಳಿತ ಯಂತ್ರವನ್ನೇ ಮರೆತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.

ಕೆ.ಆರ್.ಪುರದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್.ಶಂಕರ್, `ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮತ್ತು ಜಾತಿ ರಾಜಕಾರಣದಲ್ಲಿ ಮುಳುಗಿದೆ. ಜಾತಿಯ ಕಾರಣದಿಂದ ಅಧಿಕಾರ ಹಂಚಿಕೆ ಮಾಡುತ್ತಿರುವ ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ನಾಡಿನ ಜನತೆ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸುತ್ತಾರೆ~ ಎಂದರು.

`ಅಧಿಕಾರಕ್ಕೆ ಬಂದ ದಿನದಂದಲೂ ಬಿಜೆಪಿಯೊಳಗೆ ಆಂತರಿಕ ಕಿತ್ತಾಟ ಇದ್ದೇ ಇದೆ. ಅನಗತ್ಯವಾಗಿ ಮುಖ್ಯಮಂತ್ರಿ ಹಾಗೂ ಸಚಿವರನ್ನು ಬದಲಾಯಿಸುತ್ತಿರುವುದನ್ನು ನೊಡಿದರೆ ರಾಜ್ಯ ಬಿಜೆಪಿ ಪಕ್ಷದಲ್ಲಿ ಇರುವವರಿಗೆ ಸಮರ್ಪಕವಾಗಿ ಅಧಿಕಾರ ನಡೆಸಲು ಬರುವುದಿಲ್ಲ ಎಂಬುದು ತಿಳಿಯುತ್ತದೆ~ ಎಂದು ಅವರು ದೂರಿದರು.

ಶಾಸಕ ದಿನೇಶ್ ಗುಂಡೂರಾವ್ ಮಾತನಾಡಿ, `ಮುಖ್ಯಮಂತ್ರಿಗಳನ್ನು ಬದಲಿಸುತ್ತಾ ರಾಜ್ಯದ ಜನರಿಗೆ ಸಮರ್ಪಕ ಆಡಳಿತ ನೀಡಲು ಸೋತಿರುವ ಬಿಜೆಪಿ ಪಕ್ಷ ಹೆಚ್ಚು ದಿನ ಅಧಿಕಾರದಲ್ಲಿ ಉಳಿಯುವುದಿಲ್ಲ. ಜನರಿಗೆ ಬಿಜೆಪಿಯ ಮುಖವಾಡದ ಪರಿಚಯವಾಗಿದ್ದು, ಭ್ರಷ್ಟ ಬಜೆಪಿ ಪಕ್ಷವನ್ನು ಜನರೇ ನಿರಾಕರಿಸುತ್ತಾರೆ~ ಎಂದರು.

ಆನಂದರಾವ್ ವೃತ್ತದ ಬಳಿಯ ಮಹಾತ್ಮಗಾಂಧಿ ಪ್ರತಿಮೆಯ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ನಗರ ಕಾಂಗ್ರೆಸ್ ಸಮಿತಿ ಸದಸ್ಯ ಎಸ್.ಮನೋಹರ್, `ರಾಜ್ಯದ ಜನರು ಬರಗಾಲದಿಂದ ತತ್ತರಿಸುತ್ತಿದ್ದಾರೆ.  ಆದರೆ ಬಿಜೆಪಿ ಸರ್ಕಾರಕ್ಕೆ ಇದಾವುದೂ ಕಣ್ಣಿಗೆ ಕಾಣುತ್ತಿಲ್ಲ.

ರಾಜ್ಯದ ಜನರ ಕಷ್ಟಗಳಿಗಿಂತಾ ಅಧಿಕಾರ ಹಂಚಿಕೆಯೇ ಪಕ್ಷಕ್ಕೆ ಮುಖ್ಯವಾಗಿದೆ. ಉಳಿದಿರುವ ಅಧಿಕಾರಾವಧಿಯಲ್ಲಾದರೂ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗದೇ ಉತ್ತಮ ಆಡಳಿತ ನೀಡಬೇಕು~ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.