ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆನ್ಲೈನ್ ಮೂಲಕ ಸಲ್ಲಿಸಿದ್ದ 8,867 ಅರ್ಜಿಗಳು ತಿರಸ್ಕೃತಗೊಂಡಿವೆ.
ಅಪಾರ್ಟ್ಮೆಂಟ್ ಸಮುಚ್ಚಯಗಳಲ್ಲಿ ವಾಸ ಮಾಡುತ್ತಿರುವ ಸಾವಿರಾರು ಮಂದಿ ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್ (ಎನ್ವಿಎಸ್ಪಿ) ಮೂಲಕ ಅರ್ಜಿ ಸಲ್ಲಿಸಿದ್ದರು.
ಅರ್ಜಿ ತಿರಸ್ಕರಿಸುವುದಾದರೆ ಅದಕ್ಕೆ ನಿಖರ ಕಾರಣ ನೀಡಬೇಕು. ಜತೆಗೆ, ಇಂತಹ ದಿನ ಕಚೇರಿಗೆ ಬಂದು ಭೇಟಿಯಾಗುವಂತೆ ಅರ್ಜಿದಾರರಿಗೆ ತಿಳಿಸಬೇಕು. ಆದರೆ, ಅಧಿಕಾರಿಗಳು ನಿಖರ ಕಾರಣವನ್ನು ಸೂಚಿಸಿಲ್ಲ ಎಂದು ವೈಟ್ಫೀಲ್ಡ್ ರೈಸಿಂಗ್ ಟ್ರಸ್ಟ್ನ ಅಂಜಲಿ ದೂರಿದರು.
‘ಈ ಕುರಿತು ರಾಜ್ಯ ಮುಖ್ಯ ಚುನಾವಣಾಧಿಕಾರಿಗೂ ದೂರು ನೀಡಿದ್ದೆವು. ಹೆಸರು ಸೇರ್ಪಡೆಗೆ ಕ್ರಮ ಕೈಗೊಳ್ಳುವಂತೆ ಪಾಲಿಕೆಯ ಅಧಿಕಾರಿಗಳಿಗೆ ಸೂಚಿಸು
ವುದಾಗಿ ತಿಳಿಸಿದ್ದರು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ, ಪಾಲಿಕೆಯ ಆಯುಕ್ತರಿಗೂ ದೂರು ನೀಡಿದೆವು. ಈ ಬಗ್ಗೆ ಕ್ರಮ ವಹಿ
ಸುವಂತೆ ಬೂತ್ ಮಟ್ಟದ ಅಧಿಕಾರಿಗಳಿಗೆ (ಬಿಎಲ್ಒ) ಸೂಚಿಸುವುದಾಗಿ ತಿಳಿಸಿದ್ದರು. ಆದರೆ, ಬಿಎಲ್ಒಗಳು ಕಚೇರಿಯಲ್ಲೇ ಇರುತ್ತಿರಲಿಲ್ಲ’ ಎಂದರು.
ನಮೂನೆ 6 ಅರ್ಜಿಯನ್ನು ಭರ್ತಿ ಮಾಡಿ ನೇರವಾಗಿ ಸಲ್ಲಿಸಿದವರ ಹೆಸರುಗಳನ್ನು ಪರಿಗಣಿಸಲಾಗಿದೆ. ಆದರೆ, ಆನ್ಲೈನ್ನಲ್ಲಿ ಸಲ್ಲಿಸಿದ ಹೆಚ್ಚಿನ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಇದರ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಟ್ರಸ್ಟ್ನ ಶ್ರೀನಿವಾಸ ರೆಡ್ಡಿ ಸಂಶಯ ವ್ಯಕ್ತಪಡಿಸಿದರು.
ಬಿಎಲ್ಒ ಕಚೇರಿಯಲ್ಲಿ ಇಟ್ಟಿರುವ ಡಬ್ಬಗಳಲ್ಲಿ ಅರ್ಜಿಗಳನ್ನು ಹಾಕಬೇಕು. ಇದಕ್ಕೆ ಯಾವುದೇ ಸ್ವೀಕೃತಿ ಪತ್ರ ನೀಡುವುದಿಲ್ಲ. ಅಲ್ಲದೆ, ಅರ್ಜಿಗಳು ಕಳೆದುಹೋಗಿವೆ ಎಂದು ಬಿಎಲ್ಒಗಳು ತಿಳಿಸುತ್ತಾರೆ ಎಂದು ದೂರಿದರು.
ಅರ್ಜಿ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ವೈಟ್ಫೀಲ್ಡ್ ರೈಸಿಂಗ್ ಟ್ರಸ್ಟ್ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.