ಬೆಂಗಳೂರು: ಚಿನ್ನದ ಬೆಲೆ ಕಡಿಮೆಯಾಗಿರುವುದರಿಂದ ಆಭರಣಕೊಳ್ಳುವ ಭರಾಟೆ ನಗರದಲ್ಲಿ ಹೆಚ್ಚಾಗಿದೆ. ಇದು ನಗರದ ಸಂಚಾರ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಭಾನುವಾರ ರಜಾ ದಿನವಾದ್ದರಿಂದ ಆಭರಣಕೊಳ್ಳಲು ಹೆಚ್ಚಿನ ಜನರು ನಗರದ ಪ್ರಮುಖ ರಸ್ತೆಗಳ ಚಿನ್ನದ ಮಳಿಗೆಗಳಲ್ಲಿ ಜಮಾಯಿಸಿದ್ದರು. ಮಳಿಗೆಗಳಿಗೆ ತೆರಳಲು ಜನತೆ ರಸ್ತೆಗಳಲ್ಲಿ ವಾಹನಗಳನ್ನು ಮನಬಂದಂತೆ ನಿಲ್ಲಿಸಿದ್ದರಿಂದ ಸಂಚಾರ ದಟ್ಟಣೆ ಉಂಟಾಯಿತು.
ಮಹಾತ್ಮಗಾಂಧಿ ರಸ್ತೆಯ ಜಾಯ್ಅಲುಕಾಸ್ ಮಳಿಗೆಯ ಎದುರು ಹೆಚ್ಚಿನ ವಾಹನ ದಟ್ಟಣೆ ಕಂಡುಬಂತು. ಜಾಯ್ಅಲುಕಾಸ್ನ ವ್ಯವಸ್ಥಾಪಕ ಪ್ರಿಜು ಮಾತನಾಡಿ, `ಸಾಮಾನ್ಯವಾಗಿ ಭಾನುವಾರ ರಜೆ ಇರುವುದರಿಂದ ಹೆಚ್ಚಿನ ಗ್ರಾಹಕರು ಮಳಿಗೆಗೆ ಬರುತ್ತಾರೆ. ಆದರೆ, ಚಿನ್ನದ ಬೆಲೆ ಇಳಿದಿರುವುದರಿಂದ ಕಳೆದ ಸೋಮವಾರದಿಂದಲೂ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.
ಭಾನುವಾರ ನಿಭಾಯಿಸುವುದಕ್ಕೆ ಸಾಧ್ಯವಾಗದಷ್ಟು ಗ್ರಾಹಕರು ಮಳಿಗೆಗೆ ಭೇಟಿ ನೀಡಿದ್ದಾರೆ' ಎಂದರು.
`ನಮ್ಮಲ್ಲಿರುವ ಎಲ್ಲ ಉದ್ಯೋಗಿಗಳು ಬರುವ ಗ್ರಾಹಕರನ್ನು ನಿಭಾಯಿಸಿ ಅವರಿಗೆ ತೃಪ್ತಿಯಾಗುವ ಹಾಗೆ ಸೇವೆಯನ್ನು ಒದಗಿಸುವ ವ್ಯವಸ್ಥೆ ನಮ್ಮಲ್ಲಿದೆ. ಆದರೆ, ಇಂದು ಗ್ರಾಹಕರು 30 ರಿಂದ 40 ನಿಮಿಷಗಳು ಕಾಯಬೇಕಾದ ಸ್ಥಿತಿ ಉಂಟಾಗಿತ್ತು' ಎಂದು ಜಾಯ್ಅಲುಕಾಸ್ ಉದ್ಯೋಗಿ ಅಭಿಲಾಷ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.