ADVERTISEMENT

ಆರೋಪಿ ಹೋಲುವ ವ್ಯಕ್ತಿ ಬಂಧನ

ಎಟಿಎಂ ಘಟಕದಲ್ಲಿ ಮಹಿಳೆ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬೆಂಗಳೂರು: ನಗರದ ಎನ್‌.ಆರ್‌.­ಚೌಕದಲ್ಲಿನ ಕಾರ್ಪೊ­ರೇಷನ್‌ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಜ್ಯೋತಿ ಎಂಬು­ವರ ಮೇಲೆ ಹಲ್ಲೆ ನಡೆಸಿ ಪರಾರಿ­ಯಾಗಿದ್ದ ಆರೋಪಿಯನ್ನು ಹೋಲುವ ವ್ಯಕ್ತಿ­ಯೊಬ್ಬನನ್ನು ಆಂಧ್ರಪ್ರದೇಶದ ಕದಿರಿ ಪೊಲೀಸರು ಬುಧವಾರ ವಶಕ್ಕೆ ತೆಗೆದುಕೊಂಡಿದ್ದಾರೆ.

‘ವಶಕ್ಕೆ ತೆಗೆದುಕೊಂಡಿರುವ ವ್ಯಕ್ತಿ­ಹೆಸರು ನಾರಾಯಣರೆಡ್ಡಿ. ಅನಂತ­ಪುರ ಜಿಲ್ಲೆ ಕದಿರಿ ಸಮೀಪದ ಚೆರುವುಲ ವಾಡಾಪಲ್ಲಿ ಗ್ರಾಮದಲ್ಲಿ ವಾಸವಿರುವ ಶಿವರೆಡ್ಡಿ ,ಲಲಿತಮ್ಮ ದಂಪತಿಯ ಮಗ’ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಆತನ ಚಹರೆ ಜ್ಯೋತಿ ಅವರ ಮೇಲೆ ಹಲ್ಲೆ ನಡೆಸಿದ್ದ ದುಷ್ಕರ್ಮಿಯ ಚಹರೆಯನ್ನು ಹೋಲುವಂತಿದೆ. ಆದ್ದರಿಂದ ಕದಿರಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆಂಧ್ರಪ್ರ­ದೇಶ­ದಲ್ಲಿರುವ ನಗರದ ಸಿಬ್ಬಂದಿ ನಾರಾಯಣರೆಡ್ಡಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಪ್ರಕರಣದ ಆರೋಪಿಯಲ್ಲ ಎಂದು ಗೊತ್ತಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಮಗ ನಾರಾ­ಯ­ಣರೆಡ್ಡಿ, ವಾಪಸ್‌ ಬಂದಿರಲಿಲ್ಲ ಎಂದು ಶಿವರೆಡ್ಡಿ ದಂಪತಿ ಹೇಳಿಕೆ ಕೊಟ್ಟಿದ್ದಾರೆ ಎಂದು ತನಿಖಾಧಿ­ಕಾ­ರಿಗಳು ತಿಳಿಸಿದ್ದಾರೆ.

ಅಪರಾಧ ಹಿನ್ನೆಲೆಯುಳ್ಳ ನಾರಾ­ಯಣರೆಡ್ಡಿ ವಿರುದ್ಧ ಆಂಧ್ರಪ್ರ­ದೇಶದ ಹಲವು ಠಾಣೆಗಳಲ್ಲಿ ಕೊಲೆ, ದರೋಡೆ ಮತ್ತಿತರ ಪ್ರಕರಣಗಳು ದಾಖಲಾ­ಗಿದ್ದವು. ಅಲ್ಲದೇ, ಆತನನ್ನು ಸ್ಥಳೀಯ ಪೊಲೀಸರು ಈ ಹಿಂದೆಯೇ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.