ಬೆಂಗಳೂರು: ಉದ್ದೇಶಿತ ಬೆಂಗಳೂರು-ಮುಂಬೈ ಆರ್ಥಿಕ ಪಥ ನಿರ್ಮಾಣದ ಕಾರ್ಯಸಾಧ್ಯತೆ ಕುರಿತ ಅಧ್ಯಯನಕ್ಕೆ ಭಾರತ ಮತ್ತು ಬ್ರಿಟನ್ ಜಂಟಿಯಾಗಿ ಹಣ ಕಾಸು ಒದಗಿಸಲಿವೆ ಎಂದು ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಜೇಮ್ಸ ಬೆವನ್ ಹೇಳಿದರು.
ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಮಾಡಿದ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ ಅವರು, 1,000 ಕಿ.ಮೀ. ಉದ್ದದ ಉದ್ದೇಶಿತ ಆರ್ಥಿಕ ಪಥ ಭಾರತದಲ್ಲಿ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವುದಲ್ಲದೇ ಬ್ರಿಟನ್ನ ಕಂಪೆನಿಗಳಿಗೂ ಪೂರಕವಾಗಲಿದೆ ಎಂದರು.
`ಆರ್ಥಿಕ ಪಥ ಕುರಿತು ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ. ರಾಜ್ಯ ಸರ್ಕಾ ರದಿಂದ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಈ ಪಥ ನಿರ್ಮಾಣದ ಬಳಿಕ ಆರ್ಥಿಕ ಚಟುವಟಿಕೆಯ ಸ್ವರೂಪವೇ ಬದಲಾಗಲಿದೆ. ಆರೋಗ್ಯ, ಮಾಹಿತಿ ತಂತ್ರಜ್ಞಾನ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಕರ್ನಾಟಕದ ಜೊತೆಗಿನ ಸಂಬಂಧ ವೃದ್ಧಿಗೆ ಬ್ರಿಟನ್ ಆಸಕ್ತಿ ತಳೆದಿದೆ. ಬ್ರಿಟನ್ಗೆ ಭೇಟಿ ನೀಡುವಂತೆ ಸಿದ್ದರಾಮಯ್ಯ ಅವರಿಗೆ ಆಹ್ವಾನವನ್ನೂ ನೀಡಲಾಗಿದೆ. ಲಂಡನ್ನ ಥೇಮ್ಸ ನದಿ ಮಾದರಿಯಲ್ಲಿ ಬೆಂಗಳೂರಿನ ಅರ್ಕಾವತಿ ನದಿ ಪುನಶ್ಚೇತನಕ್ಕೆ ತಾಂತ್ರಿಕ ನೆರವು ಒದಗಿಸುವ ಭರವಸೆಯನ್ನೂ ನೀಡಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.