ADVERTISEMENT

ಇಂದು ಸಂತ ಮೇರಿ ಉತ್ಸವ ಸಂಚಾರ ಮಾರ್ಗ ಬದಲು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 19:34 IST
Last Updated 7 ಸೆಪ್ಟೆಂಬರ್ 2013, 19:34 IST

ಬೆಂಗಳೂರು:  ಶಿವಾಜಿನಗರದ ಸೇಂಟ್ ಬೆಸಲಿಕಾ ಚರ್ಚ್‌ನ ಬಳಿ ಭಾನುವಾರ (ಸೆ.8) ಸಂತ ಮೇರಿ ಉತ್ಸವ ನಡೆಯುವುದರಿಂದ ಸುತ್ತಮುತ್ತಲ ಪ್ರದೇಶದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ.

ಜ್ಯೋತಿ ಕೆಫೆ ವೃತ್ತದಿಂದ ರಸೆಲ್ ಮಾರುಕಟ್ಟೆವರೆಗೆ ಮತ್ತು ಬ್ರಾಡ್‌ವೇ ರಸ್ತೆಯಿಂದ ರಸೆಲ್ ಮಾರುಕಟ್ಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಬಿಆರ್‌ವಿ ಜಂಕ್ಷನ್‌ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಹೋಗುವ ಬಿಎಂಟಿಸಿ ಬಸ್‌ಗಳು ಸೇರಿದಂತೆ ಎಲ್ಲಾ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಮಧ್ಯಾಹ್ನ 2 ಗಂಟೆ ನಂತರ ಬಾಳೇಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದ ಕಡೆಗೆ ವಾಹನಗಳು ಸಂಚರಿಸುವಂತಿಲ್ಲ.

ರಸೆಲ್ ಮಾರುಕಟ್ಟೆ ಸುತ್ತಮುತ್ತ, ಬ್ರಾಡ್‌ವೇ ರಸ್ತೆ, ಮೀನಾಕ್ಷಿ  ಕೋಯಿಲ್ ಸ್ಟ್ರೀಟ್, ಸೆಂಟ್ರಲ್ ಸ್ಟ್ರೀಟ್, ಶಿವಾಜಿ ರಸ್ತೆ, ಯೂನಿಯನ್ ಸ್ಟ್ರೀಟ್, ಇನ್ಫೆಂಟ್ರಿ ರಸ್ತೆ, ಕಬ್ಬನ್ ರಸ್ತೆ, ಲೇಡಿ ಕರ್ಜನ್ ರಸ್ತೆ, ಪ್ಲೇನ್ ಸ್ಟ್ರೀಟ್, ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ಕಾಮರಾಜ ರಸ್ತೆ, ಸಫೀನಾ ಪ್ಲಾಜಾ ಮುಂಭಾಗ, ಕಬ್ಬನ್ ಉದ್ಯಾನದ ಕಿಂಗ್ಸ್ ರಸ್ತೆ, ಜಸ್ಮಾ ಭವನ ರಸ್ತೆ, ಆರ್‌ಬಿಎಎನ್‌ಎಂಎಸ್ ಮೈದಾನದಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ

ಭಾನುವಾರ ಬೆಳಿಗ್ಗೆಯಿಂದ ಸೋಮವಾರ (ಸೆ.9) ಬೆಳಿಗ್ಗೆ 9ರವರೆಗೆ ಬದಲಾವಣೆ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.