ADVERTISEMENT

‘ಇಂಧನ ಇಲಾಖೆಯ ಹುದ್ದೆ ಶೀಘ್ರ ಭರ್ತಿ’

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 20:03 IST
Last Updated 15 ಜುಲೈ 2017, 20:03 IST
‘ಇಂಧನ ಇಲಾಖೆಯ ಹುದ್ದೆ ಶೀಘ್ರ ಭರ್ತಿ’
‘ಇಂಧನ ಇಲಾಖೆಯ ಹುದ್ದೆ ಶೀಘ್ರ ಭರ್ತಿ’   

ಬೆಂಗಳೂರು: ಇಂಧನ ಇಲಾಖೆಯಲ್ಲಿ ಖಾಲಿ ಇರುವ 8,000 ಹುದ್ದೆಗಳನ್ನು ಎರಡು ತಿಂಗಳಲ್ಲಿ ಭರ್ತಿ ಮಾಡಲಾಗುವುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಶನಿವಾರ ಏರ್ಪಡಿಸಿದ್ದ 20ನೇ ತ್ರೈವಾರ್ಷಿಕ ಮಹಾಧಿವೇಶನ  ಉದ್ಘಾಟಿಸಿ ಅವರು ಮಾತನಾಡಿದರು.

‘ಇಂಧನ ಇಲಾಖೆಯಲ್ಲಿ ಒಟ್ಟು 30,000 ಹುದ್ದೆಗಳು ಖಾಲಿ ಇದ್ದವು. ಅದರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 22, 000 ಹುದ್ದೆ
ಗಳನ್ನು ಈಗಾಗಲೇ ಭರ್ತಿ ಮಾಡಿದೆ. ಬಾಕಿ ಹುದ್ದೆಗಳು ಕೆಲ ದಿನಗಳಲ್ಲಿಯೇ ಭರ್ತಿ ಮಾಡಲಾಗುವುದು’ ಎಂದರು.

ADVERTISEMENT

‘ವಿದ್ಯುತ್‌ ಸರಬರಾಜು ಕಂಪೆನಿಗಳನ್ನು ಖಾಸಗಿಯವರಿಗೆ ವಹಿಸಲಾಗುತ್ತದೆ ಎಂಬ ಆತಂಕ ಕೇಳಿಬರುತ್ತಿದೆ. ಆದರೆ, ನನ್ನ ಅಧಿಕಾರಾವಧಿ
ಯಲ್ಲಿ ಎಸ್ಕಾಂಗಳನ್ನು ಯಾವ ಕಾರಣಕ್ಕೂ ಖಾಸಗಿಯವರಿಗೆ ವಹಿಸುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಇಂಧನ ಇಲಾಖೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಿಬ್ಬಂದಿಯನ್ನು ಗುರುತಿಸಿ ಆಗಸ್ಟ್‌ನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸನ್ಮಾನಿಸಲಾಗುವುದು ಎಂದು ಹೇಳಿದರು.

ಕರ್ತವ್ಯದಲ್ಲಿ ಮೃತಪಡುವ ಲೈನ್‌ಮನ್‌ಗಳಿಗೆ ನೀಡುತ್ತಿದ್ದ ₹ 2 ಲಕ್ಷ ಪರಿಹಾರವನ್ನು ₹ 5 ಲಕ್ಷಕ್ಕೆ ಹೆಚ್ಚಳ ಮಾಡಲಾಗಿದೆ. ಅಲ್ಲದೆ, ಪ್ರೊಬೇಷನರಿ ಅವಧಿಯಲ್ಲಿರುವ ಸಿಬ್ಬಂದಿ ಕರ್ತವ್ಯ ದಲ್ಲಿ ಮೃತಪಟ್ಟರೆ ಅನುಕಂಪದ ಆಧಾರದ ಮೇಲೆ ಅವರ ಕುಟುಂಬದವರಿಗೆ ಉದ್ಯೋಗ ನೀಡಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.