ADVERTISEMENT

ಇನ್ಫೊಸಿಸ್ ಪ್ರತಿಷ್ಠಾನದಿಂದ ಕೊಳವೆ ಬಾವಿ

ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ನೀರಿನ ಕೊರತೆ

​ಪ್ರಜಾವಾಣಿ ವಾರ್ತೆ
Published 15 ಮೇ 2014, 19:30 IST
Last Updated 15 ಮೇ 2014, 19:30 IST
ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಗುರುವಾರ ಬನ್ನೇರುಘಟ್ಟ ಜೈವಿಕ ಉದ್ಯಾನ­ದಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ಕೊರೆಸಲಾಗಿರುವ ಕೊಳವೆ ಬಾವಿಯನ್ನು ಪರಿಶೀ­ಲಿಸಿ­ದರು. ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ನಿರ್ದೇಶಕ ಬಿ.ಟಿ. ಮಹಮ್ಮದ್‌ಅಲಿ ಚಿತ್ರದಲ್ಲಿದ್ದಾರೆ
ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಗುರುವಾರ ಬನ್ನೇರುಘಟ್ಟ ಜೈವಿಕ ಉದ್ಯಾನ­ದಲ್ಲಿ ಇನ್ಫೊಸಿಸ್ ಪ್ರತಿಷ್ಠಾನದ ವತಿಯಿಂದ ಕೊರೆಸಲಾಗಿರುವ ಕೊಳವೆ ಬಾವಿಯನ್ನು ಪರಿಶೀ­ಲಿಸಿ­ದರು. ಬನ್ನೇರುಘಟ್ಟ ಜೈವಿಕ ಉದ್ಯಾನದ ಉಪ ನಿರ್ದೇಶಕ ಬಿ.ಟಿ. ಮಹಮ್ಮದ್‌ಅಲಿ ಚಿತ್ರದಲ್ಲಿದ್ದಾರೆ   

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನದ (ಬಿಬಿಪಿ) ಮೂಲ ಸೌಕರ್ಯ ಅಭಿವೃದ್ಧಿಗೆ ಇನ್ಫೊ­ಸಿಸ್ ಪ್ರತಿಷ್ಠಾನವು ₨ 1 ಕೋಟಿ ಮೀಸಲಿರಿಸಿದೆ.

‘ಜೀವ ವೈವಿಧ್ಯದ ತಾಣವಾಗಿರುವ ಮತ್ತು   ನಗರಕ್ಕೆ ಸಮೀಪವಿರುವ ಬಿಬಿಪಿಯನ್ನು ಅಂತರ­ರಾಷ್ಟ್ರೀಯ ಮಟ್ಟಕ್ಕೆ ಏರಿಸಬೇಕು. ಈ ನಿಟ್ಟಿನಲ್ಲಿ ಇನ್ಫೊಸಿಸ್ ಪ್ರತಿಷ್ಠಾನದಿಂದ ಉದ್ಯಾನ­ದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಕಾರ್ಯ­ಗ­ಳನ್ನು ಆರಂಭಿಸಲಾಗಿದೆ’ ಎಂದು ಇನ್ಫೊಸಿಸ್  ಪ್ರತಿ­ಷ್ಠಾ­ನದ ಅಧ್ಯಕ್ಷೆ ಡಾ. ಸುಧಾ ಮೂರ್ತಿ ಹೇಳಿದರು.

ಬಿಬಿಪಿಯಲ್ಲಿ ನೀರಿನ ಕೊರತೆ ನೀಗಿಸಲು ಇನ್ಫೊ­­ಸಿಸ್  ಪ್ರತಿಷ್ಠಾನದಿಂದ ಕೊರೆಯಲಾಗಿ­ರುವ 5 ಕೊಳವೆ ಬಾವಿಗಳನ್ನು ಗುರುವಾರ ಪರಿಶೀಲಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.

‘ಬಿಬಿಪಿಗೆಂದೇ ಪ್ರಸಕ್ತ ಸಾಲಿನಲ್ಲಿ ಪ್ರತಿಷ್ಠಾನವು ₨ 1 ಕೋಟಿ ಮೀಸಲಿರಿಸಿದೆ. ಕೊಳವೆ ಬಾವಿ ಕಾಮಗಾರಿಗಾಗಿ ₨ 25 ಲಕ್ಷ ವೆಚ್ಚವಾಗಿದ್ದು, ನೀರಿನ ಸಂಗ್ರಹಣೆಗೆ  ನಿರ್ಮಿಸಲು ಉದ್ದೇಶಿಸ­ಲಾ­ಗಿರುವ ಓವರ್ ಹೆಡ್ ಟ್ಯಾಂಕ್‌ಗೆ ₨35 ಲಕ್ಷ ಖರ್ಚಾ­­ಗಲಿದೆ. ಉದ್ಯಾನಕ್ಕೆ ಅಗತ್ಯವಿರುವ ಸೌಕ­ರ್ಯ­­ಗಳನ್ನು ಕುರಿತು ಪ್ರಸ್ತಾವ ಸಲ್ಲಿಸು­ವಂತೆ ಬಿಬಿಪಿ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದರು.

ಬಿಬಿಪಿ ಉಪ ನಿರ್ದೇಶಕ ಬಿ.ಟಿ. ಮಹಮ್ಮದ್‌­ಅಲಿ, ‘ಮೃಗಾಲಯದ ಆವರಣ, ಹುಲಿ ಪುನರ್ವ­ಸತಿ ಕೇಂದ್ರ ಮತ್ತು ಸಫಾರಿಯ  ಹೊರಭಾಗದಲ್ಲಿ 5 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇದರಿಂದ ಮೃಗಾಲ­ಯದ ಪ್ರಾಣಿಗಳ ದೈನಂದಿನ ನಿರ್ವಹಣೆಗೆ, ಸಾರ್ವಜನಿಕರ ಕುಡಿ­ಯುವ ನೀರಿಗೆ ಅನುಕೂಲವಾಗಲಿದೆ’ ಎಂದರು.

‘ದುಬಾರಿ ಶುಲ್ಕ ತೆತ್ತು ಸಫಾರಿಗೆ ಹೋಗ­ಲಾ­ಗದ ಕೆಳವರ್ಗದ ಪ್ರವಾಸಿಗರಿಗೂ ಅನುಕೂಲ­ವಾಗುವಂತೆ ಮೃಗಾಲಯದ ಆವರಣದಲ್ಲೇ ಹುಲಿಯನ್ನು ವೀಕ್ಷಣೆಗೆ ಇಡುವ ಚಿಂತನೆಯಿದೆ. ಹುಲಿ ಬೋನಿನ ಕಟ್ಟಡಕ್ಕಾಗಿ ಇನ್ಫೊಸಿಸ್ ಪ್ರತಿಷ್ಠಾನಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದರು.
ಬಿಬಿಪಿಯ ಹುಲಿ ಪುನರ್ವಸತಿ ಕೇಂದ್ರದಲ್ಲಿ­ರುವ 2 ತಿಂಗಳ ಹುಲಿ ಮರಿಗಳಿಗೆ ಅಧಿಕಾರಿಗಳ ಒತ್ತಾಯದ ಮೇರೆಗೆ ಕೃಷ್ಣ ಮತ್ತು ಅನುಷ್ಕಾ ಎಂದು ತಮ್ಮ ಮೊಮ್ಮಕ್ಕಳ ಹೆಸರಿಡುವಂತೆ ಸುಧಾ ಮೂರ್ತಿ ಅವರು ತಿಳಿಸಿದರು.

ದಿನಗೂಲಿ ನೌಕರರಿಗೆ ಗೌರವಧನ
ಬಿಬಿಪಿಯಲ್ಲಿ ದುಡಿಯುತ್ತಿರುವ 200ಕ್ಕೂ ಹೆಚ್ಚಿನ ದಿನಗೂಲಿ ನೌಕರ­ರಿಗೆ ಪ್ರತಿಷ್ಠಾನದಿಂದ ವಾರ್ಷಿಕ ₨ 5 ಸಾವಿರ ಗೌರವಧನ ನೀಡಲು ₨ 10 ಲಕ್ಷ ಮತ್ತು  13 ಮಂದಿ ದಿನಗೂಲಿ ಮಾವುತರಿಗೆ ₨ 10 ಸಾವಿರ ವಿಶೇಷ ಗೌರವಧನ ನೀಡುತ್ತೇವೆ. ದಿನಗೂಲಿ ನೌಕರರ ವಿವರಗಳನ್ನು ನೀಡುವಂತೆ ಬಿಬಿಪಿ ಅಧಿಕಾರಿಗಳಿಗೆ ತಿಳಿಸಲಾ­ಗಿದೆ. ಸಾಧ್ಯವಾದರೆ ಪ್ರತೀ ವರ್ಷ ಗೌರವಧನ ನೀಡಲು ಪ್ರಯತ್ನಿಸು­ತ್ತೇವೆ ಎಂದು ಡಾ. ಸುಧಾ ಮೂರ್ತಿ ಹೇಳಿದರು.

ಆಂಬುಲೆನ್ಸ್‌ಗಾಗಿ ಬೇಡಿಕೆ
ಪ್ರಾಣಿ­ಗಳ ಚಿಕಿತ್ಸೆಗೆ ಅನುಕೂಲವಾಗು­ವಂತೆ ಡಿಜಿಟಲ್ ಸ್ಕ್ಯಾನಿಂಗ್ ಮೊದಲಾದ ಆಧುನಿಕ ಉಪ­ಕರಣ­ಗಳನ್ನು ಒಳ­ಗೊಂಡಿ­­ರುವ ಆಂಬು­ಲೆನ್ಸ್ ಒದಗಿ­ಸು­ವಂತೆ ವೈದ್ಯ­ಕೀಯ ಸಿಬ್ಬಂದಿ ಬೇಡಿಕೆ ಇಟ್ಟರು. ಸದ್ಯ ಉದ್ಯಾ­ನದ ಕಚೇರಿ ಬಳಿಯ ಆರೋಗ್ಯ ಕೇಂದ್ರಕ್ಕೆ ತಂದು ಚಿಕಿತ್ಸೆ ನೀಡ­ಲಾಗುತ್ತಿದೆ. ಸಾಗಾ­ಟ­ದಲ್ಲೇ ಸಮಯ ವ್ಯರ್ಥವಾಗುವು­ದಲ್ಲದೆ, ಪ್ರಾಣಿಗ­ಳಿಗೂ ಘಾಸಿಯಾಗುತ್ತದೆ. ಆಂಬು­ಲೆನ್ಸ್ ಇದ್ದಲ್ಲಿ ಸ್ಥಳದಲ್ಲೇ ಚಿಕಿತ್ಸೆ ನೀಡಬಹುದು ಎಂದು ವಿವರಿಸಿದರು.

ADVERTISEMENT

ಬನ್ನೇರುಘಟ್ಟಕ್ಕೆ ಬರಲಿವೆ ಹೇಸರಗತ್ತೆಗಳು
ದಕ್ಷಿಣ ಆಫ್ರಿಕಾದಿಂದ 4 ಹೇಸರಗತ್ತೆಗಳು (ಜೀಬ್ರಾ) ಬಿಬಿಪಿಗೆ ಬರಲಿವೆ. ಸಹಜ ಸಂತಾ­ನೋ­ತ್ಪತಿಗೆ ಅನುಕೂಲವಾಗುವಂತೆ 2 ಗಂಡು 2 ಹೆಣ್ಣು ಹೇಸರಗತ್ತೆಗಳನ್ನು ತರಿಸಲಾಗುತ್ತಿದೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಸುರೇಶ್ ಹೇಳಿದರು.

4 ದಿನಗಳಲ್ಲಿ ಲೇಹ್‌ನಿಂದ ಮೃಗಾಲಯಕ್ಕೆ ಎರಡು ಡುಬ್ಬ ಹೊಂದಿರುವ ಒಂಟೆಗಳು ಬರಲಿವೆ. ಈ ಎಲ್ಲಾ ಪ್ರಾಣಿಗಳನ್ನು ಸರ್ಕಾರೇತರ ಸಂಸ್ಥೆಗಳು ಮೃಗಾಲಯಕ್ಕೆ ಕೊಡುಗೆಯಾಗಿ ನೀಡಿವೆ. ಬಿಬಿಪಿಗೆ ಎರಡು ಆಫ್ರಿಕನ್ ಆನೆಗಳನ್ನು ತರುವ ಚಿಂತನೆಯಿದೆ ಎಂದರು. ಈ ಹಿಂದೆ ಬಿಬಿಪಿಗೆ ಜಿರಾಫೆ­ಗಳನ್ನು ತರುವ ಯೋಜನೆಯಿತ್ತು. ಮೈಸೂರಿನ ಮೃಗಾಲಯದಿಂದ ತರಲು ಉದ್ದೇಶಿಸ­ಲಾಗಿದ್ದ ಜಿರಾಫೆ ಮರಿ ಈಗಾಗಲೇ 12 ಅಡಿ ಎತ್ತರ ಬೆಳೆದಿದೆ. ಬಹಳ ಸೂಕ್ಷ್ಮ ಜೀವಿಗಳಾದ ಅವುಗಳನ್ನು ಒತ್ತಾಯದಿಂದ ತರುವುದು ಸಾಧ್ಯವಿಲ್ಲ. ಆದ್ದರಿಂದ ಬಿಬಿಪಿಗೆ ಜಿರಾಫೆಗಳು ಬರುವುದು ತಡವಾಗುತ್ತದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.