ADVERTISEMENT

ಇಸ್ಕಾನ್‌ ಪರಿಹಾರ ವಿತರಣೆ

ತಡೆಗೋಡೆ ಕುಸಿದ ಘಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:43 IST
Last Updated 18 ಸೆಪ್ಟೆಂಬರ್ 2013, 19:43 IST

ಬೆಂಗಳೂರು: ನಗರದ ವಸಂತಪುರದ ವೈಕುಂಠ ಹಿಲ್‌ನ ಇಸ್ಕಾನ್‌ ಕೃಷ್ಣಲೀಲಾ ಥೀಮ್‌ ಪಾರ್ಕ್‌ನಲ್ಲಿ ತಡೆಗೋಡೆ ಕುಸಿದು  ಮೃತಪಟ್ಟ, ಗಾಯ­ಗೊಂಡವರ ಕುಟುಂಬಕ್ಕೆ ಬುಧವಾರ ಪರಿಹಾರ ವಿತರಿಸಲಾಯಿತು.

ಮಂಡ್ಯದ ತೋಪಾಲಯ್ಯ, ಆರು ವರ್ಷದ ಜಯ ಹಾಗೂ ಕನಕಪುರದ ಚನ್ನಗಿರಿಯಪ್ಪ ಮೃತಪಟ್ಟಿದ್ದರು. ಇವರ ಕುಟುಂಬ ಸದಸ್ಯರಿಗೆ ತಲಾ ರೂ.4.5 ಲಕ್ಷ ಪರಿಹಾರ ನೀಡಲಾಯಿತು. ಈ ಮೊದಲೇ ತಲಾ ರೂ.50 ಸಾವಿರ ಪರಿಹಾರ ನೀಡಲಾಗಿತ್ತು.

ಘಟನೆಯಲ್ಲಿ ವೆಂಕಟೇಶ್‌, ವರಪ್ರಾದ್‌, ಮೇಲುಸ್ವಾಮಿ, ಮುರುಗೇಶ್‌, ಸರಸ್ವತಿ ಎಂಬವರು ಗಾಯಗೊಂಡಿದ್ದರು. ಇವರಿಗೆ ತಲಾ ರೂ.50 ಸಾವಿರ ಪರಿಹಾರ ವಿತರಿ­ಸ­ಲಾ­ಯಿತು.

ಘಟನೆಯಲ್ಲಿ ಗಂಭೀರ ಗಾಯ­ಗೊಂಡು ನಗರದ ಬಿಜಿಎಸ್‌ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎರಡು ವರ್ಷದ ಬಾಲಕ ಲಕ್ಷ್ಮೀಕಾಂತ್‌ ಎಂಬಾತನಿಗೆ ರೂ.3 ಲಕ್ಷ ಪರಿಹಾರ ನೀಡಲಾಯಿತು. ಈತನ ಆಸ್ಪತ್ರೆಯ ವೆಚ್ಚ ರೂ.2 ಲಕ್ಷವನ್ನು ಬಿಬಿಎಂಪಿಯೇ ಭರಿಸಲಿದೆ.

ಪರಿಹಾರ ವಿತರಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ, ‘ಈಗಿರುವ ತಡೆಗೋಡೆಯನ್ನು ತೆರವು­ಗೊಳಿಸಿ 20 ಅಡಿ ಹಿಂಭಾಗಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಸೂಚಿಸಲಾಗಿದೆ. ಘಟನೆಯಿಂದ ನೊಂದ­ವರಿಗೆ ಅಗತ್ಯ ನೆರವು ನೀಡಲಾಗುವುದು’ ಎಂದರು.

‘ಆರು ಮನೆಗಳು ಸಂಪೂರ್ಣ ಹಾನಿ­ಗೀಡಾಗಿವೆ. ಆರು ಮನೆಗಳಿಗೆ ಸ್ವಲ್ಪ  ಹಾನಿಯಾಗಿದೆ. ಆರು ಮನೆಗಳನ್ನು ಇಸ್ಕಾನ್‌ ಸಂಸ್ಥೆ ಕಟ್ಟಿಸಿಕೊಡಲಿದೆ. ಉಳಿದ ಮನೆಗಳನ್ನು ದುರಸ್ತಿ ಮಾಡಿ ಕೊಡಲಿದೆ. ಸಂತ್ರಸ್ತರಿಗೆ ತಾತ್ಕಾಲಿ­ಕವಾಗಿ ಬಾಡಿಗೆ ಮನೆಯ ವ್ಯವಸ್ಥೆ ಮಾಡಲಾಗಿದೆ’ ಎಂದರು. ಶಾಸಕ ಎಂ.ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.