ADVERTISEMENT

ಈಡಬ್ಲ್ಯುಎಸ್ ಭೂಮಿ ರಕ್ಷಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಬೆಂಗಳೂರು: `ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಂಖ್ಯೆ 115 ರ ಈಡಬ್ಲ್ಯುಎಸ್ ಸಮುಚ್ಚಯದ ಭೂಮಿಯನ್ನು ಖಾಸಗಿ ಕಂಪೆನಿಯಿಂದ ರಕ್ಷಿಸಬೇಕು~ ಎಂದು ದಲಿತ ಮತ್ತು ಅಲ್ಪಸಂಖ್ಯಾತರ ಭೂಮಿ ರಕ್ಷಣಾ ಒಕ್ಕೂಟವು ಒತ್ತಾಯಿಸಿತು.

ಸಮತಾ ಸೈನಿಕ ದಳದ ರಾಜ್ಯ ಅಧ್ಯಕ್ಷ ಎಂ.ವೆಂಕಟಸ್ವಾಮಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಆ ಸ್ಥಳದಲ್ಲಿ 3000 ಮನೆಗಳನ್ನು ನಿರ್ಮಸಲು ಅವಕಾಶವಿದೆ. ಆದರೆ, ಅಲ್ಲಿ ಬರೀ 1640 ಮನೆಗಳನ್ನು ನಿರ್ಮಿಸಿ ಮೂಲ ಫಲಾನುಭವಿಗಳಿಗೆ ಹಂಚಿಕೆ ಮಾಡಲು ಖಾಸಗಿ ಕಂಪೆನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯಾಗಿ 8 ಎಕರೆ ಭೂಮಿ ಬಿಟ್ಟು ಕೊಡಲು ತೀರ್ಮಾನಿಸಲಾಗಿದೆ~ ಎಂದು ಆರೋಪಿಸಿದರು.

`ಈಡಬ್ಲ್ಯುಎಸ್ ಭೂಮಿಯನ್ನು ಕಬಳಿಸಲು ಖಾಸಗಿ ಕಂಪೆನಿಯೊಂದಿಗೆ ಮಾಡಿಕೊಂಡಿರುವ ಜನ ವಿರೋಧಿ ಒಪ್ಪಂದವನ್ನು ಈ ಕೂಡಲೇ ರದ್ದುಗೊಳಿಸಬೇಕು. ಅದೇ ಭೂಮಿಯನ್ನು ನಂಬಿಕೊಂಡಿರುವ ಅಲ್ಲಿ ವಾಸವಿರುವ ವಸತಿಹೀನರಿಗೆ ಅದೇ ಜಾಗದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಬೇಕು~ ಎಂದು ಒತ್ತಾಯಿಸಿದರು.

`ದಲಿತರ ಮತ್ತು ಅಲ್ಪಸಂಖ್ಯಾತರ ಭೂಮಿ ರಕ್ಷಣೆಗಾಗಿ ಏ.7 ರಂದು ಬೆಂಗಳೂರು ಮಹಾನಗರ ಪಾಲಿಕೆ ಎದುರು ಧರಣಿ ಕೈಗೊಳ್ಳಲಾಗುವುದು. ಅದರ ನಂತರ ಒಂದು ವಾರ ಕಾಲಾವಧಿಯನ್ನು ನೀಡಲಾಗುವುದು. ಇದಕ್ಕೆ ಸರಿಯಾದ ಸ್ಪಂದನೆ ದೊರೆಯದಿದ್ದರೆ, ಏ.16 ರಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಿರಂತರ ಧರಣಿ ನಡೆಸಲಾಗುವುದು~ ಎಂದು ಎಚ್ಚರಿಸಿದರು.

ಒಕ್ಕೂಟದ ಅಧ್ಯಕ್ಷ ರಾಜೇಂದ್ರನ್ ಪ್ರಭಾಕರ್, ಸ್ವಾಭಿಮಾನಿ ಬಹುಜನರ ವೇದಿಕೆಯ ಎಸ್.ಎಂ.ಮಾರಿ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.