ADVERTISEMENT

ಈ ಬಾರಿಯ ಬೆಂಗಳೂರು ಪುಸ್ತಕೋತ್ಸವ ರದ್ದು

ಅರಮನೆ ಮೈದಾನ ನೀಡಲು ಅನುಮತಿ ನಿರಾಕರಣೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 19:45 IST
Last Updated 2 ಡಿಸೆಂಬರ್ 2013, 19:45 IST

ಬೆಂಗಳೂರು: ನಗರದ ಅರಮನೆ ಮೈದಾನದಲ್ಲಿ ಪುಸ್ತಕೋತ್ಸವ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅನುಮತಿ ನಿರಾಕರಿಸಿರುವುದರಿಂದ ಈ ಬಾರಿಯ ಬೆಂಗಳೂರು ಪುಸ್ತಕೋತ್ಸವ ರದ್ದುಗೊಂಡಿದೆ. ಹತ್ತು ವರ್ಷಗಳಿಂದ ನಗರದ ಅರಮನೆ ಮೈದಾನದಲ್ಲಿ ಪುಸ್ತಕೋತ್ಸವ ನಡೆಯುತ್ತಿತ್ತು. ಈ ಬಾರಿ ನ.28ರಿಂದ ಪುಸ್ತಕೋತ್ಸವ ಆರಂಭವಾಗಬೇಕಿತ್ತು. ಹತ್ತು ದಿನಗಳ ಉತ್ಸವ ನಡೆಸಲು ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘ ಉದ್ದೇಶಿಸಿತ್ತು.

ಪುಸ್ತಕೋತ್ಸವಕ್ಕೆ ಅವಕಾಶ ನೀಡಬೇಕು ಎಂದು ಸಂಘಟಕರು ಇಲಾಖೆಗೆ ಸೆ.29ರಂದು ಮನವಿ ಸಲ್ಲಿಸಿದ್ದರು. ಆದರೆ, ವಾಣಿಜ್ಯ ಉದ್ದೇಶದ ಪುಸ್ತಕೋತ್ಸವವನ್ನು ಹತ್ತು ದಿನಗಳ ಕಾಲ ನಡೆಸಲು ಅವಕಾಶ ನೀಡಲಾಗದು ಎಂದು ಇಲಾಖೆ ತಿಳಿಸಿತ್ತು. ಆನಂತರ ಸಂಘಟಕರು ಇಲಾಖೆಯಿಂದ ಅನುಮತಿ ಕೊಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು.

ಮುಖ್ಯಮಂತ್ರಿಯವರ ಸೂಚನೆಯ ಮೇರೆಗೆ ಮೂರು ದಿನಗಳ ‘ವಿಶೇಷ ಅನುಮತಿ’ ನೀಡಲು ನಿರ್ಧರಿಸಿದ ಇಲಾಖೆಯ ಅಧಿಕಾರಿಗಳು  ಈ ಬಗ್ಗೆ ನ.26ರಂದು ಸಂಘಟಕರಿಗೆ ಪತ್ರ ಬರೆದಿದ್ದರು. ಆದರೆ, ಮೂರು ದಿನಗಳ ಉತ್ಸವ ನಡೆಸುವ ಬದಲು ಈ ಬಾರಿ ಪುಸ್ತಕೋತ್ಸವ ನಡೆಸದಿರುವುದೇ ಸರಿಯೆಂದು ಸಂಘಟಕರು ನಿರ್ಧರಿಸಿದ್ದಾರೆ.

‘ಮೂರು ದಿನ ಉತ್ಸವ ನಡೆಸುವುದು ಉಚಿತವಲ್ಲವೆಂದು ಉತ್ಸವ ರದ್ದುಗೊಳಿಸಲಾಗಿದೆ. ವಾಣಿಜ್ಯ ಉದ್ದೇಶದ ಕಾರ್ಯಕ್ರಮ ನಡೆಸಲು  ಅರಮನೆ ಮೈದಾನದಲ್ಲಿ ಅವಕಾಶ ನೀಡುವುದಿಲ್ಲ ಎಂದಾದರೆ ಇಡೀ ವರ್ಷ ‘ಫನ್‌ ವರ್ಲ್ಡ್‌’, ‘ಸ್ನೋ ಸಿಟಿ’ ನಡೆಸಲು ಅನುಮತಿ ನೀಡಿರುವುದು ಯಾವ ಆಧಾರ ಮೇಲೆ’ ಎಂದು ಬೆಂಗಳೂರು ಪುಸ್ತಕೋತ್ಸವ ಸಮಿತಿ ಕಾರ್ಯದರ್ಶಿ ದೇವರು ಭಟ್‌ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT