ADVERTISEMENT

ಎಂಜಿನಿಯರಿಂಗ್ ಸೌಲಭ್ಯ ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST
ಎಂಜಿನಿಯರಿಂಗ್ ಸೌಲಭ್ಯ ಕೇಂದ್ರ ಉದ್ಘಾಟನೆ
ಎಂಜಿನಿಯರಿಂಗ್ ಸೌಲಭ್ಯ ಕೇಂದ್ರ ಉದ್ಘಾಟನೆ   

ಬೆಂಗಳೂರು: ಆಕ್ಸಿಸ್ ವೈಮಾನಿಕ ಹಾಗೂ ತಾಂತ್ರಿಕ ಕಂಪೆನಿಯ (ಎಎಟಿ)ಯು ಗ್ರಾಹಕರಿಗೆ ಸಮರ್ಪಕ ಸೇವೆ ಒದಗಿಸುವ ಉದ್ದೇಶದಿಂದ ಹೆಬ್ಬಾಳದ ಕಿರ್ಲೋಸ್ಕರ್ ಉದ್ಯಮ ಪಾರ್ಕ್‌ನಲ್ಲಿ 50 ಸಾವಿರ ಚದರ ಅಡಿ ಪ್ರದೇಶದಲ್ಲಿ ಅತ್ಯಾಧುನಿಕ ಎಂಜಿನಿಯರಿಂಗ್ ಸೌಲಭ್ಯ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವನ್ನು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಇತ್ತೀಚೆಗೆ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರು ಮಾತನಾಡಿ, `ಕಳೆದ ಕೆಲವು ವರ್ಷಗಳಲ್ಲಿ ವೈಮಾನಿಕ ಕ್ಷೇತ್ರದಲ್ಲಿ ಆಗಿರುವ ತೀವ್ರಗತಿಯ ಪ್ರಗತಿ ಅತೀವ ಸಂತಸ ತಂದಿದೆ. ಆಕ್ಸಿಸ್ ವೈಮಾನಿಕ ಮತ್ತು ತಾಂತ್ರಿಕ ಕಂಪೆನಿಯು ರಾಜ್ಯದ ಪ್ರಮುಖ ಉದ್ಯಮ ಸಂಸ್ಥೆಗಳಲ್ಲಿ ಒಂದು. ಈ ಸಂಸ್ಥೆ ಭವಿಷ್ಯದಲ್ಲಿ ಇನ್ನಷ್ಟು ಪ್ರಗತಿಯನ್ನು ಸಾಧಿಸುವಂತಾಗಬೇಕು. ಆಕ್ಸಿಸ್ ಸೇರಿದಂತೆ ಹಲವು ಕಂಪೆನಿಗಳ ಕೊಡುಗೆಯಿಂದ ವೈಮಾನಿಕ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ರಾಜ್ಯವು ದಕ್ಷಿಣ ಏಷ್ಯಾದ ಕೇಂದ್ರಸ್ಥಾನ ಆಗಲಿದೆ~ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಕ್ಸಿಸ್ ವೈಮಾನಿಕ ಮತ್ತು ತಾಂತ್ರಿಕ ಕಂಪೆನಿಯ ಉಪಾಧ್ಯಕ್ಷ ಸುಧಾಕರ ಗಂಡೆ ಮಾತನಾಡಿ, `ಈ ವ್ಯವಸ್ಥೆ ಕಾರ್ಯನಿರ್ವಹಣೆ ಆರಂಭಿಸಿರುವುದು ಬಹಳ ಸಂತೋಷ ತಂದಿದೆ. ಸಂಸ್ಥೆಯ ಪ್ರಗತಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ಇದೆ~ ಎಂದು ಸಂತಸ ವ್ಯಕ್ತಪಡಿಸಿದರು.

`ವೈಮಾನಿಕ, ರಕ್ಷಣೆ, ಹೆವಿ ಎಂಜಿನಿಯರಿಂಗ್ ಉದ್ಯಮ ಹಾಗೂ ಅಟೋಮೆಟಿವ್ ಕ್ಷೇತ್ರಕ್ಕೆ ಸೇವೆ ಒದಗಿಸುತ್ತಿರುವ ಎಕ್ಸಿಸ್ ಸಂಸ್ಥೆಯ ದೇಶದ ಪ್ರಮುಖ ಕಂಪೆನಿಗಳಲ್ಲಿ ಒಂದು. ಸಂಸ್ಥೆಯಲ್ಲಿ 1500ಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲೇ ಕಂಪೆನಿಯು 75 ಎಕರೆ ವಿಸ್ತೀರ್ಣದಲ್ಲಿ ವೈಮಾನಿಕ ಪಾರ್ಕ್ ಹೊಂದಿದೆ. ಜಾಗತಿಕ ವೈಮಾನಿಕ ಹಾಗೂ ರಕ್ಷಣಾ ಕಂಪೆನಿಗಳಿಗೆ ಉತ್ಪಾದನಾ ಬೆಂಬಲವನ್ನು ಒದಗಿಸಲು ಇಲ್ಲಿ ಘಟಕವೊಂದನ್ನು ಆರಂಭಿಸಲು ಉದ್ದೇಶಿಸಲಾಗಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.