ADVERTISEMENT

ಎಂಜಿನಿಯರ್ ಸೇರಿ ಇಬ್ಬರ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 19:30 IST
Last Updated 14 ಜನವರಿ 2012, 19:30 IST

ಬೆಂಗಳೂರು: ಮಹದೇವಪುರ ಮತ್ತು ಚಿಕ್ಕಜಾಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಸೇರಿದಂತೆ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹದೇವಪುರ ಸಮೀಪದ ರಾಮಾಂಜನೇಯಪ್ಪ ಲೇಔಟ್ ನಿವಾಸಿ ಕಲ್ಪೇಶ್ ದೀಪದಾಸ್ ಶರ್ಮ (25) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರು ವೈಟ್‌ಫೀಲ್ಡ್‌ನಲ್ಲಿರುವ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಗುಜರಾತ್ ಮೂಲದ ಅವರು ಅದೇ ರಾಜ್ಯದ ಕಲ್ಪನಾ ಶರ್ಮ ಎಂಬುವರನ್ನು ಪ್ರೀತಿಸಿ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿ ರಾಮಾಂಜನೇಯಪ್ಪ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಕಲ್ಪನಾ ಕಾಲ್‌ಸೆಂಟರ್ ಉದ್ಯೋಗಿ ಎಂದು ಪೊಲೀಸರು ತಿಳಿಸಿದ್ದಾರೆ.

ಕಲ್ಪನಾ ಸಹೋದ್ಯೋಗಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾರೆ ಎಂದು ಕಲ್ಪೇಶ್ ಅವರಿಗೆ ಅನುಮಾನವಿತ್ತು. ಈ ಕುರಿತು ದಂಪತಿ ಮಧ್ಯೆ ಹಲವು ಬಾರಿ ಜಗಳವಾಗಿತ್ತು. ಇದರಿಂದ ಕೋಪಗೊಂಡಿದ್ದ ಕಲ್ಪೇಶ್, ಪತ್ನಿಯ ತಂದೆಗೆ ಜ.12ರಂದು ಕರೆ ಮಾಡಿ ಕಲ್ಪನಾ ಅವರನ್ನು ಗುಜರಾ  ತ್‌ಗೆ ಕರೆದುಕೊಂಡು ಹೋಗುವಂತೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಕಲ್ಪನಾ ತಂದೆ ಜ.12ರಂದು ನಗರಕ್ಕೆ ಬಂದು ಮಗಳನ್ನು ಗುಜರಾತ್‌ಗೆ ಕರೆದುಕೊಂಡು ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಶುಕ್ರವಾರ ಬೆಳಿಗ್ಗೆ ಪತ್ನಿಗೆ ಕರೆ ಮಾಡಿದ್ದ ಕಲ್ಪೇಶ್ ವಿವಾಹ ವಿಚ್ಛೇದನ ನೀಡುವಂತೆ ಕೇಳಿದ್ದರು. ಈ ವೇಳೆ ಪತಿಯೊಂದಿಗೆ ಮಾತನಾಡಲು ನಿರಾಕರಿಸಿದ್ದ ಕಲ್ಪನಾ ಕರೆ ಸ್ಥಗಿತಗೊಳಿಸಿದ್ದರು. ಇದರಿಂದ ಬೇಸರಗೊಂಡಿದ್ದ ಕಲ್ಪೇಶ್ ಶುಕ್ರವಾರ ಕೆಲಸಕ್ಕೆ ಹೋಗದೆ ಮನೆಯಲ್ಲಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ಸ್ನೇಹಿತರ ಮೊಬೈಲ್‌ಗೆ ಎಸ್‌ಎಂಎಸ್ ಕಳುಹಿಸಿದ್ದ ಅವರು, `ಇದೇ ನನ್ನ ಕೊನೆಯ ಎಸ್‌ಎಂಎಸ್. ಇನ್ನು ಮುಂದೆ ನೀವು ನನ್ನನ್ನು ಭೇಟಿ ಮಾಡಲು ಸಾಧ್ಯವಿಲ್ಲ~ ಎಂದು ತಿಳಿಸಿದ್ದರು. ಇದರಿಂದ ಆತಂಕಗೊಂಡ ಸ್ನೇಹಿತರು ಅವರ ಮನೆಯ ಬಳಿ ಬರುವ ವೇಳೆಗೆ ಕಲ್ಪೇಶ್ ನೇಣು ಹಾಕಿಕೊಂಡಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಕಲ್ಪನಾಳನ್ನು ಮದುವೆಯಾಗುವ ಉದ್ದೇಶಕ್ಕಾಗಿ ಪೋಷಕರನ್ನೆಲ್ಲ ಬಿಟ್ಟು ಬಂದೆ. ಆದರೆ ಆಕೆ ಅನ್ಯಾಯ ಮಾಡಿದಳು. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ~ ಎಂದು ಕಲ್ಪೇಶ್ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.     ಮಹದೇವಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತೊಂದು ಪ್ರಕರಣ: ಚಿಕ್ಕಜಾಲ ಸಮೀಪದ ವಿದ್ಯಾನಗರ ಕ್ರಾಸ್‌ನಲ್ಲಿ ನೆಲೆಸಿದ್ದ ಬಿಸಂ (36) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಛತ್ತೀಸ್‌ಗಡ ಮೂಲದ ಅವರು ಕೆಲಸ ಹುಡುಕಿಕೊಂಡು ಶುಕ್ರವಾರ ಬೆಳಿಗ್ಗೆಯಷ್ಟೇ ನಗರಕ್ಕೆ ಬಂದಿದ್ದರು. ಸ್ನೇಹಿತರ ಶೆಡ್‌ನಲ್ಲಿ ಬಿಸಂ ನೆಲೆಸಿದ್ದರು. ಸ್ನೇಹಿತರೆಲ್ಲ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಅವರು ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಚಿಕ್ಕಜಾಲ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.