ಬೆಂಗಳೂರು: ಚಲಿಸುತ್ತಿದ್ದ ಬಿಎಂಟಿಸಿ ಬಸ್ನ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ಗಾಬರಿಗೊಂಡ ಯುವಕ, ಕಿಟಕಿ ಗಾಜು ಒಡೆದು ಕೆಳಗೆ ಜಿಗಿಯುವ ಯತ್ನದಲ್ಲಿ ಬಸ್ನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರ ಸಮೀಪದ ಭಟ್ಟರಹಳ್ಳಿಯಲ್ಲಿ ಶುಕ್ರವಾರ ನಡೆದಿದೆ.
ಬಿಹಾರ ಮೂಲದ ಸೂರಜ್ ಪಾಸ್ವಾನ್ (22) ಮೃತಪಟ್ಟವರು. ನಗರದ ಗ್ರಾನೈಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಅವರು, ಹೊಸಕೋಟೆಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಕೆಲಸದ ನಿಮಿತ್ತ ಬಿಎಂಟಿಸಿ ಬಸ್ನಲ್ಲಿ ನಗರಕ್ಕೆ ಬರುವಾಗ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಹರಳೂರು– ಆರ್.ಮಾರುಕಟ್ಟೆ ಮಾರ್ಗದ ಬಿಎಂಟಿಸಿ ಬಸ್ ಭಟ್ಟರಹಳ್ಳಿ ಬಸ್ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಎಂಜಿನ್ನಲ್ಲಿ ಹೊಗೆ ಕಾಣಿಸಿಕೊಂಡಿದೆ. ಆಗ ಗಾಬರಿಗೊಂಡ ಚಾಲಕ ಬ್ರೇಕ್ ಹಾಕಿ ವಾಹನದಿಂದ ಕೆಳಗೆ ಜಿಗಿದಿದ್ದಾನೆ. ನಂತರ ನಿರ್ವಾಹಕ ಕೂಡ ಕೆಳಗೆ ಹಾರಿದ್ದಾನೆ. ಈ ಸಂದರ್ಭದಲ್ಲಿ ಬಸ್ ನಿಧಾನವಾಗಿ ಮುಂದೆ ಸಾಗಿದೆ. ಚಾಲಕನಿಲ್ಲದೆ ಬಸ್ ಸಾಗುತ್ತಿರುವುದರಿಂದ ಗಾಬರಿಗೊಂಡ ಪ್ರಯಾಣಿಕರು, ಬಸ್ನಿಂದ ಇಳಿಯಲು ಮುಂದಾಗಿದ್ದಾರೆ.
‘ಘಟನೆ ಸಂದರ್ಭದಲ್ಲಿ ಬಸ್ನಲ್ಲಿ 35 ಮಂದಿ ಪ್ರಯಾಣಿಕರು ಇದ್ದರು. ಕೆಲವರು ವಾಹನದ ಬಾಗಿಲಿನಿಂದ ಕೆಳಗಿಳಿದರೆ, ಮತ್ತೆ ಕೆಲವರು ಕಿಟಕಿ ಗಾಜು ಒಡೆದು ಧುಮುಕಿದ್ದಾರೆ. ಆಗ ಸೂರಜ್ ಸಹ ಕಿಟಕಿ ಮೂಲಕ ಕೆಳಗೆ ಜಿಗಿದಿದ್ದಾರೆ. ಈ ಸಂದರ್ಭದಲ್ಲಿ ಮುಂದೆ ಸಾಗುತ್ತಿದ್ದ ಬಸ್, ರಸ್ತೆ ಉಬ್ಬು ಸಿಕ್ಕಿದ್ದರಿಂದ ಹಿಂದಕ್ಕೆ ಬರಲಾರಂಭಿಸಿದೆ. ಆಗ ಮುಂದಿನ ಚಕ್ರ ಸೂರಜ್ ಮೇಲೆ ಹರಿದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಹಿಮ್ಮುಖವಾಗಿ ಬಂದು ಸೂರಜ್ ಅವರ ಮೇಲೆ ಹರಿದ ಬಸ್, ನಂತರ ಅಶೋಕ್ ಎಂಬುವರ ಆಟೊಗೆ ಡಿಕ್ಕಿ ಗುದ್ದಿ ಮೋರಿಗೆ ಇಳಿದಿದೆ. ಘಟನೆ ನಂತರ ಚಾಲಕ ಮತ್ತು ನಿರ್ವಾಹಕ ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಕೆ.ಆರ್.ಪುರ ಸಂಚಾರ ಪೊಲೀಸರು ಹೇಳಿದ್ದಾರೆ. ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.