ಬೆಂಗಳೂರು: ವಕೀಲ ಅಮಿತ್ ಕೇಶವಮೂರ್ತಿ ಶೂಟ್ಔಟ್ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಆಗಿ ನೇಮಕಗೊಂಡಿರುವ ಸಿ.ಎಚ್.ಹನುಮಂತರಾಯ ಅವರನ್ನು ಬದಲಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಈ ಸಂಬಂಧ ಆರೋಪಿಗಳಾದ ರಾಜೇಶ್ ಹಾಗೂ ಗೋಪಾಲಕೃಷ್ಣ ಸಲ್ಲಿಸಿದ್ದ ರಿಟ್ ಅರ್ಜಿಗಳನ್ನು ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರಿದ್ದ ಏಕ
ಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ‘ಯಾವ ವಕೀಲರು ವಿಚಾರಣೆಗೆ ಹಾಜರಾಗ
ಬೇಕು, ಯಾವ ನ್ಯಾಯಮೂರ್ತಿಗಳ ಮುಂದೆ ವಿಚಾರಣೆ ನಡೆಯಬೇಕು ಎಂಬುದನ್ನು ನಿರ್ಧರಿಸಲು ನಿಮಗೆ ಯಾವ ಅರ್ಹತೆಯಿದೆ’ ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.
‘ಇದೊಂದು ಕೊಲೆ ಪ್ರಕರಣ. ಆರೋಪಿಗಳೇ ಅರ್ಜಿ ಸಲ್ಲಿಸಿ ಎಸ್ಪಿಪಿ ಬದಲಾವಣೆಗೆ ಕೋರುವುದು ಎಂದರೆ ಏನರ್ಥ’ ಎಂದು ಆಶ್ಚರ್ಯ ವ್ಯಕ್ತಪಡಿಸಿದ
ನ್ಯಾಯಮೂರ್ತಿಗಳು, ‘ಇಂಥ ಅರ್ಜಿಗಳು ನ್ಯಾಯಾಂಗ ವ್ಯವಸ್ಥೆಗೆ ಮಾರಕ’ ಎಂದು ಆತಂಕ ವ್ಯಕ್ತಪಡಿಸಿದರು.
ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ, ‘ಅರ್ಜಿದಾರರು ಈ ನೇಮಕ ಪ್ರಶ್ನಿಸುವ ಅರ್ಹತೆ ಹೊಂದಿಲ್ಲ. ಅರ್ಜಿ
ಯಲ್ಲೂ ಈ ಕುರಿತಂತೆ ಯಾವುದೇ ಸಕಾರಣ ನೀಡಿಲ್ಲ. ಹಾಗಾಗಿ ಈ ಅರ್ಜಿಮಾನ್ಯ ಮಾಡಬಾರದು’ ಎಂದು ವಿನಂತಿಸಿದರು.
‘ಹನುಮಂತರಾಯ ಅವರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿ ಹೊಂದಿದ್ದಾರೆ. ಅವರಿಂದ ನಿಷ್ಪಕ್ಷಪಾತ ವಾದ ಮಂಡನೆ ಸಾಧ್ಯವಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.