ADVERTISEMENT

ಐದು ತಿಂಗಳಲ್ಲಿ ಐದು ವರ್ಷದ ಅನುಭವ- ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2012, 19:59 IST
Last Updated 24 ಡಿಸೆಂಬರ್ 2012, 19:59 IST

ಬೆಂಗಳೂರು: `ಮುಖ್ಯಮಂತ್ರಿಯಾಗಿ ಐದು ತಿಂಗಳು ನಡೆಸಿರುವ ಆಡಳಿತವು ಐದು ವರ್ಷ ಅವಧಿಯ ಅನುಭವವನ್ನು ನೀಡಿದೆ' ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದರು.ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿಗಳ ಸಂಘವು (ಕವಿಪವಿ) ಭಾರತೀಯ ವಿದ್ಯಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ  ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

`ರಾಜಕೀಯ ತಲ್ಲಣಗಳ ನಡುವೆಯೂ ಉತ್ತಮ ಆಡಳಿತ ನೀಡಿರುವುದಕ್ಕೆ ಖುಷಿ ಇದೆ. ಇದರೊಂದಿಗೆ ಆಡಳಿತ ನಡೆಸುವುದು ಕಷ್ಟವಲ್ಲ, ಸ್ವಲ್ಪ ಪರಿಶ್ರಮ ಹಾಕಿದರೆ ಸರ್ಕಾರವನ್ನು ಸಮರ್ಪಕವಾಗಿ ನಿಭಾಯಿಸ ಬಹುದು ಎಂಬ ಆತ್ಮವಿಶ್ವಾಸ ಬೆಳೆದಿದೆ' ಎಂದು ತಿಳಿಸಿದರು.`ಕ್ಷೇತ್ರವಾರು ಪ್ರಗತಿಯಲ್ಲಿ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತುನೀಡಬೇಕಿದ್ದು, ಇದಕ್ಕೆ ಸರ್ಕಾರ ಸಂಪೂರ್ಣ ಬದ್ಧವಾಗಿದೆ.

ಪ್ರಜಾಪ್ರಭುತ್ವದ ಮೌಲ್ಯಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುವ ಮಾಧ್ಯಮ ವಲಯ ಹೈದರಾಬಾದ್ ಕರ್ನಾಟಕದ ಸಮಸ್ಯೆಗಳ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲುವ ಅಗತ್ಯವಿದೆ. ಪ್ರತಿಭಟನೆಯಿಂದ ಮಾತ್ರ  ಸೌಲಭ್ಯಗಳ ಬೇಡಿಕೆಗಳು ಈಡೇರುತ್ತವೆ. ಬಿಜೆಪಿ ಸರ್ಕಾರವು ಪತ್ರಿಕೋದ್ಯಮಕ್ಕೆ ಹೆಚ್ಚಿನ ಬೆಂಬಲ ನೀಡುವ ದಿಸೆಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪತ್ರಿಕಾಭವನಗಳ ನಿರ್ಮಾಣಕ್ಕೆ ಆದ್ಯತೆ ನೀಡಿದೆ. ಇದರೊಂದಿಗೆ ಹಿರಿಯ ಪತ್ರಕರ್ತರಿಗೆ ಮಾಸಿಕ ಧನವನ್ನು ಮೂರುಸಾವಿರ ರೂಪಾಯಿವರೆಗೆ ಹೆಚ್ಚಿಸಲಾಗಿದೆ' ಎಂದು ತಿಳಿಸಿದರು.

ಶಿಲ್ಪಾ ಶೆಟ್ಟರ್ ಮಾತನಾಡಿ, `ನಂಬಿಕೆಯನ್ನು ಜೀವಾಳವಾಗಿಸಿಕೊಂಡಿರುವ ಉತ್ತರ ಕರ್ನಾಟಕದ ಮಂದಿ ಮುಗ್ಧರು. ಈ ಭಾಗದಿಂದ ಬಂದ ಮುಗ್ಧ ಮುಖ್ಯಮಂತ್ರಿಗೆ ಎಲ್ಲರ ಸಹಕಾರವಿರಲಿ' ಎಂದು ಕೋರಿದರು.ವಿ.ವಿಯ ಹಳೆಯ ವಿದ್ಯಾರ್ಥಿಗಳಾದ ವಾರ್ತಾ ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ, ಹಿರಿಯ ಪತ್ರಕರ್ತರಾದ ರವೀಂದ್ರ ಭಟ್ ಐನಕೈ,ಆರ್.ಕೆ.ಜೋಶಿ, ಡಾ.ಬಂಡು ಕುಲಕರ್ಣಿ, ಗೋವಿಂದ ಬೆಳಗಾಂವಕರ, ಡಿ.ಗರುಡ, ಶಂಕರ ಪಾಗೋಜಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ಮುಖಸ್ಥರಾದ ಡಾ.ಎ.ಎಸ್. ಬಾಲಸುಬ್ರಹ್ಮಣ್ಯ,ಸಂಸ್ಥೆಯ ಗುರುಲಿಂಗಸ್ವಾಮಿ ಹೊಳಿಮಠ, ಪ್ರಧಾನ ಕಾರ್ಯದರ್ಶಿ ಪ್ರವೀಣ ಶಿರಿಯಣ್ಣವರ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.