ಬೆಂಗಳೂರು: ಡಿಜಿಪಿ ದರ್ಜೆಯ ಅಧಿಕಾರಿಯೊಬ್ಬರ ಪುತ್ರ ಪಾನಮತ್ತನಾಗಿ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಗರದ ಹೊಸೂರು ರಸ್ತೆಯ ಸಿಲ್ಕ್ ಬೋರ್ಡ್ ಜಂಕ್ಷನ್ ಸಮೀಪ ಜೂನ್ 9ರಂದು ರಾತ್ರಿ ಐಪಿಎಸ್ ಅಧಿಕಾರಿಯೊಬ್ಬರ ಪುತ್ರ ಮತ್ತು ಆತನ ಸ್ನೇಹಿತರು ಕಾರಿನಲ್ಲಿ ಕುಳಿತು ಪಾನಮತ್ತರಾಗಿ ಗದ್ದಲ ಮಾಡುತ್ತಿದ್ದರು. ಆಗ ಸಮೀಪದಲ್ಲೇ ಗಸ್ತು ತಿರುಗುತ್ತಿದ್ದ ಮಡಿವಾಳ ಠಾಣೆ ಎಎಸ್ಐ ಪ್ರಕಾಶ್ ಮತ್ತು ಇತರೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮನೆಗೆ ಹೋಗುವಂತೆ ಆತನಿಗೆ ಬುದ್ದಿಮಾತು ಹೇಳಿದ್ದಾರೆ.
ಇದರಿಂದ ಕೆರಳಿದ ಆತ, `ನಾನು ಐಪಿಎಸ್ ಅಧಿಕಾರಿಯ ಮಗ. ನನ್ನನ್ನು ಪ್ರಶ್ನಿಸಲು ನಿಮಗೆ ಅಧಿಕಾರವಿಲ್ಲ' ಎಂದು ಸಿಬ್ಬಂದಿ ಜತೆ ವಾಗ್ವಾದ ನಡೆಸಿದ್ದಾನೆ. ಸಿಬ್ಬಂದಿ ಆತನನ್ನು ಠಾಣೆಗೆ ಕರೆದುಕೊಂಡು ಹೋಗಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಎಎಸ್ಐ ಪ್ರಕಾಶ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳ ಜತೆಯೂ ವಾಗ್ವಾದ ನಡೆಸಿದ್ದಾನೆ. ಆ ನಂತರ ಸ್ನೇಹಿತರೊಂದಿಗೆ ಠಾಣೆಗೆ ಬಂದ ಆತ, ಎಸ್ಐ ದರ್ಜೆಯ ಅಧಿಕಾರಿಯಿಂದ ವಾಕಿಟಾಕಿ ಕಸಿದುಕೊಂಡು ಹಲ್ಲೆ ಮಾಡಲೆತ್ನಿಸಿದ್ದಾನೆ.
ಇಷ್ಟೆಲ್ಲಾ ರಾದ್ಧಾಂತ ಮಾಡಿದ ಆತನ ವಿರುದ್ಧ ಠಾಣೆಯ ಸಿಬ್ಬಂದಿ ದೂರು ದಾಖಲಿಸಲು ಮುಂದಾದರೂ ಹಿರಿಯ ಅಧಿಕಾರಿಗಳು ಅವಕಾಶ ಕೊಟ್ಟಿಲ್ಲ.
`ಈ ಕುರಿತು ದೂರು ದಾಖಲಿಸದಂತೆ ಹಿರಿಯ ಅಧಿಕಾರಿಗಳೇ ನಮ್ಮ ಮೇಲೆ ಒತ್ತಡ ಹೇರಿದರು. ಅಲ್ಲದೇ, ಪ್ರಕರಣ ದಾಖಲಿಸಿದರೆ ಸೇವೆಯಿಂದ ಅಮಾನತು ಪಡಿಸುವುದಾಗಿಯೂ ಬೆದರಿಸಿದರು' ಎಂದು ಮಡಿವಾಳ ಠಾಣೆಯ ಮೂಲಗಳು `ಪ್ರಜಾವಾಣಿ'ಗೆ ತಿಳಿಸಿವೆ.
ಈ ಬಗ್ಗೆ ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಘಟನೆ ಬಗ್ಗೆ ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಹಲ್ಲೆ ನಡೆಸಿದ ಯುವಕನ ತಂದೆ 1981ನೇ ಬ್ಯಾಚ್ನ ಐಪಿಎಸ್ ಅಧಿಕಾರಿ. ಲೋಕಾಯುಕ್ತ, ಸಿಐಡಿ ಸೇರಿದಂತೆ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಆ ಅಧಿಕಾರಿ ಇತ್ತೀಚೆಗಷ್ಟೇ ಬಡ್ತಿ ಪಡೆದು ಸಿಬಿಐಗೆ ವರ್ಗಾವಣೆಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.