ಬೆಂಗಳೂರು: ಮಾಜಿ ಶಾಸಕ ಐ.ಪಿ.ಡಿ ಸಾಲಪ್ಪ ಅವರ ವರದಿಯನ್ನು ಜಾರಿಗೊಳಿಸುವುದು, ಸೇವೆ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆ ಪೌರ ಕಾರ್ಮಿಕರ ಒಕ್ಕೂಟದ ಸದಸ್ಯರು ಪಾಲಿಕೆಯ ಕೇಂದ್ರ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
‘ಐ.ಪಿ.ಡಿ ಸಾಲಪ್ಪ ವರದಿ ಪ್ರಕಾರ ಪ್ರತಿ 500 ಜನಸಂಖ್ಯೆಗೆ ಒಬ್ಬರಂತೆ ಪೌರ ಕಾರ್ಮಿಕರು ಇರಬೇಕು. ಈ ವರದಿಯಲ್ಲಿ ತಿಳಿಸಿರುವಂತೆ ನಗರಕ್ಕೆ 30 ಸಾವಿರ ಕಾರ್ಮಿಕರ ಅಗತ್ಯ ಇದೆ. ಆದರೆ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯ 4,000 ಕಾಯಂ, 17,000 ಗುತ್ತಿಗೆ ಕಾರ್ಮಿಕರು ಮಾತ್ರ ಇದ್ದಾರೆ. ಇನ್ನೂ 9,000 ಕಾರ್ಮಿಕರ ಕೊರತೆ ಇದೆ ಎಂದ ಒಕ್ಕೂಟದ ಅಧ್ಯಕ್ಷ ಮುನಿರಾಜು ಹೇಳಿದರು.
‘ವರ್ಷಕ್ಕೆ ನಮಗೆ 30 ರಜೆಗಳಿವೆ. ಆದರೆ, ಸಿಗುವುದು 15 ರಜೆಗಳು ಮಾತ್ರ’ ಎಂದು ಪೌರ ಕಾರ್ಮಿಕ ಎನ್.ನರಸರಾಜನ್ ಆರೋಪಿಸಿದರು.
‘ಸಿ.ಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದು, ಸಭೆ ಕರೆಯುವುದಾಗಿ ಭರವಸೆ ನೀಡಿದ್ದಾರೆ’ ಎಂದು ಗಂಗಾಧರ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.