ಬೆಂಗಳೂರು: ಹಾಸ್ಟೆಲ್ ಕಟ್ಟಡದ 3ನೇ ಮಹಡಿಯಿಂದ ಜಿಗಿದು ದಯಾನಂದಸಾಗರ್ ಕಾಲೇಜಿನ ಪಿಯು ವಿದ್ಯಾರ್ಥಿ ಜಿಹಾನ್ವುಲ್ಲಾ ಅಲಂ (17) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಂಬೈನ ಅಲಂ, ಕಾಲೇಜಿನ ಹಾಸ್ಟೆಲ್ನಲ್ಲೇ ಉಳಿದುಕೊಂಡಿದ್ದ. ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ಆತ ಕಟ್ಟಡದಿಂದ ಕೆಳಗೆ ಹಾರಿದ್ದಾನೆ. ಇತರೆ ವಿದ್ಯಾರ್ಥಿಗಳು ಹಾಗೂ ಹಾಸ್ಟೆಲ್ನ ಸಿಬ್ಬಂದಿ ಅಲಂನನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
‘ಆತ್ಮಹತ್ಯೆಗೆ ನಿಖರ ಕಾರಣ ಗೊತ್ತಾಗಿಲ್ಲ. ಘಟನೆ ಕುರಿತು ಮೃತನ ಪೋಷಕರಿಗೆ ಮಾಹಿತಿ ನೀಡಿದ್ದೇವೆ. ಸೋಮವಾರ ಬೆಳಿಗ್ಗೆ ಅವರು ನಗರಕ್ಕೆ ಬರಲಿದ್ದಾರೆ. ಪೋಷಕರು ಕೊಡುವ ದೂರು ಆಧರಿಸಿ ತನಿಖೆ ನಡೆಸಲಾಗುವುದು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.
‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮಧ್ಯಾಹ್ನ ಏಕಾಏಕಿ ಕೊಠಡಿಯಿಂದ ಹೊರ ಬಂದ ಅಲಂ, ಕಾರಿಡಾರ್ನ ಮೂರು ಅಡಿ ಎತ್ತರದ ಸಿಮೆಂಟ್ ಕಟ್ಟೆ ಹತ್ತಿ ನಿಂತ. ಕೂಡಲೇ ನಾವು ರಕ್ಷಣೆಗೆ ಧಾವಿಸಿದೆವು. ಆದರೆ, ಆತ ಕೆಳಗೆ ಹಾರಿಬಿಟ್ಟ’ ಎಂದು ವಿದ್ಯಾರ್ಥಿಗಳು ಹೇಳಿಕೆ ಕೊಟ್ಟಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಮರಣಪತ್ರವಿದೆ: ಮೃತನ ಕೊಠಡಿಯಲ್ಲಿ ಮೂರು ಪುಟಗಳ ಮರಣ ಪತ್ರ ಸಿಕ್ಕಿದ್ದು, ತನ್ನ ಸಾವಿಗೆ ಕಾರಣವೇನು ಎಂಬ ಬಗ್ಗೆ ಆತ ಪತ್ರದಲ್ಲಿ ವಿಸ್ತಾರವಾಗಿ ಬರೆದಿದ್ದಾನೆ ಎಂದು ತಿಳಿದು ಬಂದಿದೆ.
ಆದರೆ, ಪತ್ರ ಇರುವುದನ್ನು ಖಚಿತಪಡಿಸಿದ ಪೊಲೀಸರು, ‘ಪೋಷಕರಿಗೆ ಕ್ಷಮಾಪಣೆ ಕೋರಿರುವುದನ್ನು ಬಿಟ್ಟರೆ, ಪತ್ರದಲ್ಲಿ ಬೇರೆ ಏನೂ ಬರೆದಿಲ್ಲ’ ಎಂದಿದ್ದಾರೆ.
ಸದ್ಯ ಅಸಹಜ ಸಾವು ಆರೋಪದಡಿ ಪ್ರಕರಣ ದಾಖಲಿಸಿಕೊಂಡಿರುವ ಕುಮಾರಸ್ವಾಮಿಲೇಔಟ್ ಪೊಲೀಸರು, ಹಾಸ್ಟೆಲ್ ಸಿಬ್ಬಂದಿ, ಕಾಲೇಜು ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ವಿಚಾರಣೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.