ಬೆಂಗಳೂರು: ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣವೊಂದರ ಕಡತ ಹರಿದುಹಾಕಿ ಹೆಡ್ ಕಾನ್ಸ್ಟೆಬಲ್ಗೆ ಬೆದರಿಕೆವೊಡ್ಡಿರುವ ಆರೋಪದಡಿ ಎಂ.ಟಿ.ಗಿರೀಶ್ಗೌಡ ಎಂಬಾತನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಏ. 12ರಂದು ನಡೆದ ಘಟನೆ ಸಂಬಂಧ ಹೆಡ್ ಕಾನ್ಸ್ಟೆಬಲ್ ಎಂ.ವೆಂಕಟೇಶ್ ದೂರು ನೀಡಿದ್ದಾರೆ. ‘ರಾಜ್ಯ ರೈತ ಸಂಘದ ಅಧ್ಯಕ್ಷನೆಂದು ಹೇಳಿಕೊಂಡು ಠಾಣೆಗೆ ಬಂದಿದ್ದ ಗಿರೀಶ್ ಗೌಡ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ತನ್ನ ಮೇಲೆ ಹಲ್ಲೆಯಾಗಿರುವುದಾಗಿ ಹೇಳಿದ್ದ ಗಿರೀಶ್ಗೌಡ, ’ಕರ್ನಾಟಕ ರಾಜ್ಯ ರೈತ ಸಂಘ’ ಹಾಗೂ ‘ಮಾನವ ಹಕ್ಕುಗಳ ಸಮಿತಿ’ ಹೆಸರಿನ ಲೇಟರ್ ಹೆಡ್ನಲ್ಲಿ ಜ. 1ರಂದು ದೂರು ನೀಡಿದ್ದ. ಹಲ್ಲೆ ಮಾಡಿದವರು ಅಪರಿಚಿತರು ಎಂದು ಆತನೇ ನಮೂದಿಸಿದ್ದ. ಅದರನ್ವಯ ಎಫ್ಐಆರ್ ದಾಖಲಾಗಿತ್ತು’.
’ಏ. 12ರಂದು ಠಾಣೆಗೆ ಬಂದಿದ್ದ ಆರೋಪಿ, ತಾನು ಹೇಳಿದ ಹೆಸರುಗಳನ್ನು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿ ಕೊಲೆಗೆ ಯತ್ನ ಆರೋಪದಡಿ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಒತ್ತಾಯಿಸಿದ್ದ. ಆ ರೀತಿ ಮಾಡಲು ಆಗುವುದಿಲ್ಲ. ತನಿಖೆಯಲ್ಲಿ ಆರೋಪ ಸಾಬೀತಾದರೆ ಮಾತ್ರ ಅವರ ಹೆಸರುಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದಿದ್ದೆ’
‘ಆಗ ಆರೋಪಿ, ‘ಸಂಘದ ಅಧ್ಯಕ್ಷರಾಗಿದ್ದ ಪುಟ್ಟಣ್ಣಯ್ಯ ತೀರಿಕೊಂಡ ಮೇಲೆ ನಾನೇ ಎಲ್ಲ. ಹಲವು ಇನ್ಸ್ಪೆಕ್ಟರ್ಗಳನ್ನು ವರ್ಗಾವಣೆ ಮಾಡಿಸಿದ್ದೇನೆ. ನಾನು ಹೇಳಿದಂತೆ ಕೇಳದಿದ್ದರೆ, ನಿನಗೂ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆವೊಡ್ಡಿದ್ದ. ಸ್ಥಳದಲ್ಲಿದ್ದ ಸಿಬ್ಬಂದಿ, ಆರೋಪಿಗೆ ಬುದ್ದಿವಾದ ಹೇಳಿದ್ದರು. ಅವರ ಮಾತಿಗೆ ಬೆಲೆ ಕೊಡದ ಆರೋಪಿ, ನನ್ನ ಕೈ ಹಿಡಿದು ಎಳೆದು ಕುರ್ಚಿಯಿಂದ ಬೀಳಿಸಿದ್ದ. ಟೇಬಲ್ ಮೇಲಿದ್ದ ಪ್ರಕರಣದ ಕಡತವನ್ನು ಹರಿದುಹಾಕಿ ಸ್ಥಳದಿಂದ ಹೊರಟು ಹೋದ’ ಎಂದು ವೆಂಕಟೇಶ್ ದೂರಿನಲ್ಲಿ ಹೇಳಿದ್ದಾರೆ.
ಪೊಲೀಸ್ ಅಧಿಕಾರಿ, ‘ಆರೋಪಿಯು ನೀಡಿದ್ದ ದೂರಿನ ತನಿಖೆ ನಡೆಯುತ್ತಿರುವಾಗಲೇ ಈ ಘಟನೆ ನಡೆದಿದೆ. ಆತನ ಉದ್ದೇಶವೇನು ಎಂಬುದನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.