ADVERTISEMENT

ಕನ್ನಡಕ್ಕೆ ಪೂರ್ತಿ ಸಿಗದ ಪುಣೇಕರರ ಪ್ರತಿಭೆ ಲಾಭ

​ಪ್ರಜಾವಾಣಿ ವಾರ್ತೆ
Published 24 ಜೂನ್ 2012, 19:30 IST
Last Updated 24 ಜೂನ್ 2012, 19:30 IST

ಬೆಂಗಳೂರು: `ನಾಡಿನ ಶ್ರೇಷ್ಠ ಸಾಹಿತಿ ಶಂಕರ ಮೊಕಾಶಿ ಪುಣೇಕರ ಮಹಾಮೇಧಾವಿ. ಅವರಿಗೆ ದ.ರಾ.ಬೇಂದ್ರೆ ಅವರ ಉತ್ತರಾಧಿಕಾರಿ ಆಗುವ ಎಲ್ಲ ಯೋಗ್ಯತೆ ಇತ್ತು. ಆದರೆ ಅವರ ಪ್ರತಿಭೆಯ ಸಂಪೂರ್ಣ ಫಲ ಕನ್ನಡಕ್ಕೆ ದೊರಕಲಿಲ್ಲ~ ಎಂದು ಹಿರಿಯ ವಿಮರ್ಶಕ ಜಿ. ಎಸ್. ಆಮೂರ ಅಭಿಪ್ರಾಯಪಟ್ಟರು.

ಅಭಿನವ ಪ್ರಕಾಶನದ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಭಾನುವಾರ ನಡೆದ ಸಮಾರಂಭದಲ್ಲಿ ಜಿ. ಬಿ. ಹರೀಶ್ ಅವರು ಸಂಪಾದಿಸಿರುವ `ಶಂಕರ ಮೊಕಾಶಿ ಪುಣೇಕರ ಅವರ ಸಮಸ್ತ ಸಾಹಿತ್ಯ~ ಕೃತಿಗಳನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

`ಅಧ್ಯಾತ್ಮ, ಕಾವ್ಯ ಶಕ್ತಿ, ಜ್ಞಾನ ಸಂಗ್ರಹ, ವೈಚಾರಿಕತೆ, ಮರಾಠಿ, ಕನ್ನಡ ಹಾಗೂ ಸಂಸ್ಕೃತ ಭಾಷಾ ಸಂಗಮಗಳು ಸೇರಿದಂತೆ ಅನೇಕ ವಿಚಾರಗಳಲ್ಲಿ ಪುಣೇಕರ ಹಾಗೂ ಬೇಂದ್ರೆ ಅವರ ನಡುವೆ ಹೋಲಿಕೆ ಇದೆ. ಆದರೆ ಬೇಂದ್ರೆ ಅವರ ವಾರಸುದಾರ ಆಗುವ ಎಲ್ಲ ಯೋಗ್ಯತೆ ಇದ್ದರೂ ಈ ಸುಸಂಧಿಯನ್ನು ಪುಣೇಕರ ಕಳೆದುಕೊಂಡರು. ಅದಕ್ಕೆ ಆಗಿನ ಸಾಮಾಜಿಕ ಹಾಗೂ ಸಾಹಿತ್ಯ ಪರಿಸರ ಕಾರಣ. ಅಲ್ಲದೆ ಅವರ ಅತಿಯಾದ ಇಂಗ್ಲಿಷ್ ಮೋಹ ಸಹ ತೊಡಕಾಯಿತು. ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರಲಿಲ್ಲ~ ಎಂದು ಅವರು ಅಭಿಪ್ರಾಯಪಟ್ಟರು.

`ಅವರಿಗೆ ಪಾಶ್ಚಾತ್ಯ ಸಾಹಿತ್ಯದ ಬಗ್ಗೆ ಅತಿಯಾದ ಪ್ರೀತಿ ಇತ್ತು. ಇಂಗ್ಲಿಷರಿಗೆ ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ, ಬಡ ಭಾಷೆ ಎಂದು ಟೀಕಿಸಿದರು. ಆ ಭಾಷೆಯನ್ನು ಉನ್ನತಗೊಳಿಸುವ ಹೊಣೆಯನ್ನೂ ಹೊತ್ತುಕೊಂಡರು. ಇದೊಂದು ಹಾದಿ ತಪ್ಪಿದ ಮಹತ್ವಾಕಾಂಕ್ಷೆ ಆಗಿತ್ತು. ಇದರಿಂದಾಗಿ ಅವರ ಪ್ರತಿಭೆ ಹಂಚಿ ಹೋಯಿತು. ಸಾಹಿತಿಗಳಾದ ಯು.ಆರ್. ಅನಂತಮೂರ್ತಿ, ಚಂದ್ರಶೇಖರ ಪಾಟೀಲ ಅವರಿಗೆ ಆಂಗ್ಲ ಭಾಷೆಯ ಪಾಂಡಿತ್ಯ ಇದ್ದರೂ ಆ ಭಾಷೆಯನ್ನು ಮೆರೆಯಿಸಲು ಹೋಗಲಿಲ್ಲ~ ಎಂದು ಅವರು ಪ್ರತಿಪಾದಿಸಿದರು. 

`ನಮ್ಮ ಕಾಲದ ಅತ್ಯಂತ ಪ್ರತಿಭಾವಂತ ಲೇಖಕರಾಗಿದ್ದ ಪುಣೇಕರ ಅವರ ಲೇಖನಗಳು ಒಂದು ಕಡೆ ದೊರಕುವುದು ಕಷ್ಟ ಆಗಿತ್ತು. ಕೆಲವರು ತಮ್ಮ ಸೀಮಿತ ಪ್ರತಿಭೆಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ತಮ್ಮ ಕೃತಿಗಳನ್ನು ವ್ಯವಸ್ಥಿತವಾಗಿ ಇಡಬೇಕು ಎಂದು ಯೋಚಿಸುವುದಿಲ್ಲ. ಪುಣೇಕರ ಅವರು ಆ ಗುಂಪಿಗೆ ಸೇರಿದವರು. ಅವರು ಅವಧೂತರ ರೀತಿಯಲ್ಲಿ ಬದುಕಿದರು~ ಎಂದರು.

`ಪುಣೇಕರ ಅವರ ಕೃತಿಗಳ ಹೊಸ ಅಭ್ಯಾಸ ಆಗಬೇಕು. ಸಾಹಿತ್ಯ ಚರಿತ್ರೆಯನ್ನು ಮರಳಿ ಓದುವ ಅವಶ್ಯಕತೆ ಇದೆ. ಯುವ ಜನತೆ ಸಾಹಿತ್ಯ ಓದಿನ ಕಡೆಗೆ ಮನ ಮಾಡಬೇಕು. ನಮ್ಮ ಶಕ್ತಿ ಹಾಗೂ ಅರ್ಥ ಸಾಧನೆಯನ್ನು ಸರಿಯಾಗಿ ಉಪಯೋಗಿಸಬೇಕು~ ಎಂದರು.

ವಿಮರ್ಶಕ ಬಸವರಾಜ ಕಲ್ಗುಡಿ ಮಾತನಾಡಿ, `ಪುಣೇಕರ ಅವರು ನಾಡಿನ ಶ್ರೇಷ್ಠ ಸೃಜನಶೀಲ ಬರಹಗಾರರು. ಅವರ ಬರಹಗಳನ್ನು ಸೀಮಿತವಾಗಿ ಓದಲಾಗಿದೆ. ಅವರ ಕುರಿತು ಇರುವ ತಪ್ಪು ಅಭಿಪ್ರಾಯಗಳನ್ನು ತೆಗೆದು ಹಾಕುವ ಅಗತ್ಯ ಇದೆ~ ಎಂದರು.

ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್ ಅಧ್ಯಕ್ಷತೆ ವಹಿಸಿ, `ಈ ಸಂಪುಟ ರಸ ವಿನೋದದ ಮಂಜೂಷ~ ಎಂದು ಬಣ್ಣಿಸಿ, `ಪುಣೇಕರ ಅವರಿಗೆ ನವ್ಯ, ನವೋದಯ ಎಂಬ ಯಾವ ಹಣೆಪಟ್ಟಿಯೂ ಹೊಂದಿಕೆ ಆಗುವುದಿಲ್ಲ. ಅವರಿಗೆ ಹಣೆಪಟ್ಟಿ ಅಂಟಿಸುವುದು ಸರಿಯೂ ಅಲ್ಲ. ಅವರ ವ್ಯಕ್ತಿತ್ವದ ದೊಡ್ಡ ಗುಣ ಸಹಜತೆ. ಅದೇ ಸಹಜತೆ ಅವರ ಸಾಹಿತ್ಯದಲ್ಲಿದೆ~ ಎಂದು ಅವರು ಹೇಳಿದರು.

ಕೃತಿಗಳ ಸಂಪಾದಕ ಜಿ. ಬಿ. ಹರೀಶ್,  ಶಂಕರ ಮೊಕಾಶಿ ಪುಣೇಕರ ಅವರ ಪುತ್ರ ವಸಂತ ಮೊಕಾಶಿ ಪುಣೇಕರ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ `ಮಹತಿ~-ಸಂಪುಟ 1 (ಪಾಶ್ಚಾತ್ಯ ಸಾಹಿತ್ಯ ಸಂಸ್ಕೃತಿಗಳ ತೌಲನಿಕ ಚಿಂತನೆ), `ವಸ್ತು ವಿನ್ಯಾಸ~- ಸಂಪುಟ 2 (ಕನ್ನಡ ಸಾಹಿತ್ಯ ಸಂಸ್ಕೃತಿಗಳ ಸಾಂಸ್ಕೃತಿಕ ಓದು), `ಸುಸಂಧಿ~- ಸಂಪುಟ 3 (ಕಥೆ- ಕವಿತೆ- ನಾಟಕ), `ಕಾದಂಬರಿ ತ್ರಿವಳಿ~ ಸಂಪುಟ 4 (ನಟನಾರಾಯಣಿ, ಗಂಗವ್ವ ಗಂಗಾಬಾಯಿ, ಅವಧೇಶ್ವರಿ) ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.