ಬೆಂಗಳೂರು: ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದ ಎರಡನೇ ಘಟಕಕ್ಕೆ ಕಲ್ಲಿದ್ದಲು ಪೂರೈಕೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು, ಶುಕ್ರವಾರದಿಂದಲೇ ಈ ಘಟಕ ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.
ವಿದ್ಯುತ್ ಕಡಿತ ಕುರಿತಂತೆ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಶೋಭಾ, `ಬಳ್ಳಾರಿ ಘಟಕಕ್ಕೆ ಕಲ್ಲಿದ್ದಲು ಒದಗಿಸಲು ಒಪ್ಪಿಗೆ ಸೂಚಿಸಿ ಕೇಂದ್ರ ಸರ್ಕಾರ ಈಗಾಗಲೇ ಪತ್ರದ ಮೂಲಕ ತಿಳಿಸಿದೆ. ಹತ್ತು ದಿನಗಳಲ್ಲಿ ಕಲ್ಲಿದ್ದಲು ಲಭ್ಯವಾಗಬಹುದು. 500 ಮೆಗಾ ವಾಟ್ ವಿದ್ಯುತ್ ಈ ಘಟಕದಿಂದ ಲಭ್ಯವಾಗಲಿದೆ. ಉಡುಪಿ ಶಾಖೋತ್ಪನ್ನ ವಿದ್ಯುತ್ ಸ್ಥಾವರದಿಂದಲೂ 600 ಮೆಗಾ ವಾಟ್ ಸದ್ಯದಲ್ಲೇ ಲಭ್ಯವಾಗಲಿದೆ. ಇದರಿಂದ ವಿದ್ಯುತ್ ಕೊರತೆ ತಕ್ಕಮಟ್ಟಿಗೆ ನೀಗಬಹುದು~ ಎಂದರು. ಬೇಸಿಗೆಯ ಪರಿಣಾಮವಾಗಿ ನಿತ್ಯವೂ 200 ದಶಲಕ್ಷ ಯೂನಿಟ್ ವಿದ್ಯುತ್ಗೆ ಬೇಡಿಕೆ ಇದ್ದು, 180 ದಶಲಕ್ಷ ಯೂನಿಟ್ ಪೂರೈಸಲಾಗುತ್ತಿದೆ.
ಬೆಂಗಳೂರು ನಗರದಲ್ಲೇ ನಿತ್ಯದ ಬೇಡಿಕೆ 350 ಮೆಗಾ ವಾಟ್ಗೆ ತಲುಪಿದೆ. ಎಲ್ಲೂ ಅಧಿಕೃತವಾಗಿ ಲೋಡ್ಶೆಡ್ಡಿಂಗ್ ಜಾರಿಗೊಳಿಸಿಲ್ಲ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.